ಗೋಕರ್ಣ: ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ನಡೆದಿದೆ. ಇಲ್ಲಿನ ಓಂ ಬೀಚ್ಗೆ ತೆರಳುವ ರಸ್ತೆಯಲ್ಲಿ ಕಾರು ಬುಧವಾರ ಅಪಘಾತಕ್ಕೀಡಾಗಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತಗೊಂಡ ಕಾರಿನಲ್ಲಿದ್ದ ಇಬ್ಬರನ್ನು 108 ವಾಹನದ ಮೂಲಕ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರಕ್ಕೆ ಕಳುಹಿಸಲಾಗಿದೆ. ಗಾಯಾಳುಗಳು ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲದ ಪ್ರಯುಕ್ತ ಅವರನ್ನು ಕೂಡಲೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಯಿತು. ಹೀಗಾಗಿ ಗಾಯಾಳುಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪಿಎಸ್ಐ ನವೀನ ನಾಯ್ಕ ತಿಳಿಸಿದ್ದಾರೆ.
ಕಾರು ಪಲ್ಟಿಯಾಗಿ ಒಬ್ಬ ಸಾವು: ಹಿರೇಗುತ್ತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಸವದತ್ತಿ ಬಳಿಯ ಹಿಟ್ಟಣಗಿ ಗ್ರಾಮದ ಪತ್ರೇಶ ಬಸನಗೌಡ ಗೌಡರ ಎಂಬುವರು ತಲೆಗೆ ಭಾರಿ ಪೆಟ್ಟುಬಿದ್ದು ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮಾಂತಯ್ಯ ಶಾಂತಯ್ಯ ದುಪ್ಪದ ಎಂಬುವವರು ಸಹ ಗಾಯಗೊಂಡಿದ್ದಾರೆ. ಈ ಕುರಿತು ಚಾಲಕ ಬೈಲಹೊಂಗಲ ಆನಗೊಳದ ಶೇಖರ ಈರಯ್ಯ ಪೂಜಾರ ಎಂಬುವರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.