ಹಳಿಯಾಳ: ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಆರ್.ವಿ. ದೇಶಪಾಂಡೆ ಅವರು ಅಧಿಕಾರಿಗಳ ತಂಡದೊಂದಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ವರುಣನ ಆರ್ಭಟಕ್ಕೆ ಎರಡು ದಿನಗಳಿಂದ ತಾಲೂಕಿನಲ್ಲಿ 330 ಮಿಮಿಗೂ ಅಧಿಕ ಮಳೆಯಾಗಿದೆ. ಪರಿಣಾಮ ನದಿಗಳು ಉಕ್ಕಿ ಹರಿದಿದ್ದು ಕೆರೆಗಳು ತುಂಬಿ ರಸ್ತೆಯ ಮೇಲೆ ನೀರು ಹರಿದಿದೆ. ಬಹುತೇಕ ಕಡೆಗಳಲ್ಲಿ ರಸ್ತೆ ಮತ್ತು ಸೇತುವೆಗಳು ಹಾಗೂ 100ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.
ಪಟ್ಟಣದ ಗುಡ್ನಾಪುರ ಕೆರೆ, ಮುರ್ಕವಾಡ ಕೆರೆ ಹಾನಿಗೀಡಾಗಿರುವುದನ್ನು ಶಾಸಕರು ಪರಿಶೀಲಿಸಿದರು. ತಟ್ಟಿಹಳ್ಳಕ್ಕೆ ನಿರ್ವಿುಸಲಾಗಿರುವ ಮುಗದಕೊಪ್ಪ, ಮಂಗಳವಾಡ ತೆರಗಾಂವ ಹಾಗೂ ದುಸಗಿ ಸೇತುವೆಗ ತಾಗಿ ಅಪಾರ ಪ್ರಮಾಣದಲ್ಲಿ ಮಣ್ಣು ಕುಸಿದಿದು ಸಂಚಾರಕ್ಕೆ ಸಮಸ್ಯೆಯಾಗಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಳಪೆ ಕಾಮಗಾರಿ: ಕಳೆದ ವರ್ಷ ಕೈಗೊಂಡ ಕಾಮಗಾರಿಗಳು ಈ ವರ್ಷದ ಮಳೆಗೆ ಸಂಪೂರ್ಣ ಹಾನಿಯಾಗಿರುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ದೇಶಪಾಂಡೆ ಅವರು, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಇವೆಲ್ಲ ಕಳಪೆ ಗುಣಮಟ್ಟದ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ಪುರಸಭೆ ಅಧ್ಯಕ್ಷ ಅಜರುದ್ದಿನ್ ಬಸರೀಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ ಕೋರ್ವೆಕರ, ತಹಸೀಲ್ದಾರ್ ಪ್ರವೀಣ ಹುಚ್ಚಣವರ, ತಾಪಂ ಇಒ ಪ್ರವೀಣ ಸಾಲಿ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.
ಕೆಲಸ ಮಾಡದಿದ್ದರೆ ಕಠಿಣ ಕ್ರಮ: ಲೋಕೋಪಯೋಗಿ ಇಲಾಖೆಯವರು ಕಳೆದ 3 ವರ್ಷಗಳಿಂದ ದುಸಗಿ ಗ್ರಾಮದ ಸನಿಹದ ಸೇತುವೆಯನ್ನು ದುರಸ್ತಿ ಮಾಡುತ್ತಲೇ ಇದ್ದಾರೆ. ಅಲ್ಲದೆ, ಇದು ಅವೈಜ್ಞಾನಿಕ ಮತ್ತು ಕಳಪೆಯಾಗಿದೆ ಎಂದು ಸಾರ್ವಜನೀಕರು ಶಾಸಕರಿಗೆ ಮಾಹಿತಿ ನೀಡಿದರು. ಇದರಿಂದ ಕೆಂಡಾಮಂಡಲರಾದ ದೇಶಪಾಂಡೆ ಅವರು, ‘ಇಲಾಖೆಯ ಹೆಸರನ್ನು ಹಾಳು ಮಾಡಬೇಡಿ. ಸಾಧ್ಯವಾದರೆ ಕೆಲಸ ಮಾಡಿ ಇಲ್ಲವೆಂದರೆ ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗಿ ಇಲ್ಲವೇ ಕಠಿಣ ಕ್ರಮ ಎದುರಿಸಿ’ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ರೈತರ ಬೆಳೆಗಳು ಅಧಿಕ ಪ್ರಮಾಣದಲ್ಲಿ ನಷ್ಟಕ್ಕೊಳಗಾಗಿದ್ದು ಸೂಕ್ತ ಪರಿಹಾರ ಒದಗಿಸಲು ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಕೂಡಲೇ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.