ಕೊಳ್ಳೇಗಾಲ: ಕ್ಷೇತ್ರದ ಜನರ ನಾಡಿ ಮಿಡಿತವನ್ನು ಅರಿತಿದ್ದೇನೆ. ಈ ಬಾರಿ ಅತ್ಯಧಿಕ ಮತಗಳನ್ನು ನೀಡಿ ಗೆಲ್ಲಿಸಿ, ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕ್ಷೇತ್ರ ವ್ಯಾಪ್ತಿಯ ಅರೇಪಾಳ್ಯ, ಹಿತ್ತಲದೊಡ್ಡಿ, ತಮಿಳು ಕಾಲನಿ, ಎರೆಕಟ್ಟೆ, ಕೆ.ಮೂಕಹಳ್ಳಿ, ಬನ್ನಿಸಾರಿಗೆ, ತೆಳ್ಳನೂರು, ಪುಟ್ಟೇಗೌಡನ ಹುಂಡಿ, ಕೆಸ್ತೂರು, ಬಾನಳ್ಳಿ ಗ್ರಾಮದಲ್ಲಿ ಶನಿವಾರ ಬಿರುಸಿನ ಪ್ರಚಾರ ನಡೆಸಿದ ಬಳಿಕ ಜಕ್ಕಳಿ ಗ್ರಾಮದಲ್ಲಿ ಜನರ ಉದ್ದೇಶಿಸಿ ಅವರು ಮಾತನಾಡಿದರು.
ಎಲ್ಲ ಜಾತಿ, ಧರ್ಮದವರು ಸೌಹರ್ಧಯುತವಾಗಿ ಜೀವನ ನಡೆಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದು ಜನರಿಗೆ ತಿಳಿದಿದೆ. ಸತತ ಸೋಲಿನಿಂದ ನೊಂದು ನಿಮ್ಮಲ್ಲಿ ಮತ ಭೀಕ್ಷೆ ಕೇಳಲು ಬಂದಿದ್ದೇನೆ. ಎನ್.ಮಹೇಶ್ 3 ಬಾರಿ ಸೋತಿದ್ದರು ಎಂಬ ಕಾರಣಕ್ಕೆ ಕಳೆದ ಬಾರಿ ಗೆಲ್ಲಿಸಿದ್ದೀರಿ. 2 ಲೋಕಸಭೆ ಹಾಗೂ 4 ವಿಧಾನಸಭಾ ಚುನಾವಣೆಯನ್ನು ಸೋತಿದ್ದೇನೆ. ಸತತವಾಗಿ 6 ಬಾರಿ ಪರಾಭವಗೊಂಡ ನನ್ನನ್ನು ಈ ಬಾರಿ ಅತ್ಯಧಿಕ ಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ನಮ್ಮ ತಂದೆ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರು ಕಂದಾಯ ಸಚಿವರಾಗಿದ್ದಾಗ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಜನರಿಗೆ ಒಳಿತನ್ನು ಮಾಡಿದ್ದಾರೆ. ಆ ರೀತಿ ಕುಟುಂಬದಿಂದ ಬಂದ ನನಗೆ ನಿಮ್ಮ ಆರ್ಶೀವಾದ ಬೇಕಿದೆ. ಒಂದು ಬಾರಿ ಗೆಲ್ಲಿಸಿದರೆ ನಿಮ್ಮ ಕಷ್ಟ, ಸುಖಕ್ಕೆ ಸ್ಪಂದಿಸುತ್ತೇನೆ. ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ ಎಂದು ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಮುಖಂಡ ಓಲೆ ಮಹದೇವ, ನಾಗರಾಜು, ಪರಶಿವ ಮೂರ್ತಿ, ನಾಗರಾಜು, ಕೃಷ್ಣರಾಜ್, ಪಾಪಣ್ಣ, ಜಗದೀಶ್, ಚಿನ್ನಸ್ವಾಮಿ ಮಾಳಿಗೆ, ಸ್ವಾಮಿ ನಂಜಪ್ಪ, ಸಿದ್ದರಾಜು, ಪ್ರವೀಣ್, ಶಿವು ಕುಣಗಳ್ಳಿ ಮತ್ತಿತರಿದ್ದರು.