ಧಾರವಾಡ: ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಶದಲ್ಲಿರುವ 6 ಸುಪಾರಿ ಹಂತಕರ ವಿಚಾರಣೆ ಬುಧವಾರವೂ ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಮೊದಲು ಬಂಧಿತರಾಗಿದ್ದ ಆರೋಪಿಗಳ ವಿಚಾರಣೆ ವೇಳೆ ಕೊಲೆಗೆ ಸುಪಾರಿ ಪಡೆದಿದ್ದ ಹಂತಕರ ಸುಳಿವು ಸಿಕ್ಕಿತ್ತು. ಅದರನ್ವಯ ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ದಿನೇಶ, ಸುನೀಲಕುಮಾರ, ನೂತನ, ಅಶ್ವತ್ಥ, ಶಾನವಾಜ್, ನಜೀರ್ ಅಹ್ಮದ್ ಎಂಬುವರನ್ನು ಬಂಧಿಸಿದ್ದರು. ಜಿಲ್ಲಾ ನ್ಯಾಯಾಲಯ ಆರೋಪಿಗಳಿಗೆ ಮಾ. 7ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು. ಮಂಗಳವಾರ 6 ಸುಪಾರಿ ಹಂತಕರ ಪೈಕಿ ನಾಲ್ವರನ್ನು ಕೊಲೆ ನಡೆದಿದ್ದ ಸಪ್ತಾಪುರದ ಉದಯ ಜಿಮ್ೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ಅಲ್ಲದೆ ಮೊದಲು ಬಂಧಿತರಾಗಿದ್ದ ಸಂದೀಪ, ವಿನಾಯಕ ಕಟಗಿ ಮತ್ತು ಮುದಕಪ್ಪ ಹಾಗೂ ಬಸವರಾಜ ಮುತ್ತಗಿ ಕಾರು ಚಾಲಕ ಸಂತೋಷ ಸವದತ್ತಿಯನ್ನು ಉಪನಗರ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಕೊಲೆಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದ್ದಾರೆ.
ಲಾಜ್ನಿಂದ ದಾಖಲೆ ವಶ : ಬುಧವಾರ ರಾತ್ರಿ ನಗರದ ಲಾಜ್ ಒಂದಕ್ಕೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಕೆ.ಸಿ. ಪಾರ್ಕ್ ಎದುರಿನ ಅಂಕಿತ ರೆಸಿಡೆನ್ಸಿಗೆ ತನಿಖಾಧಿಕಾರಿಗಳು ತೆರಳಿ, ಸ್ವಾಗತಕಾರರ ಕೌಂಟರ್ನಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ ಕೊಲೆ ನಡೆದ ಹಿಂದಿನ ದಿನ ಆರೋಪಿ ಬಸವರಾಜ ಮುತ್ತಗಿ ಹೆಸರಿನಲ್ಲಿ ಕೊಠಡಿಯೊಂದನ್ನು ಮೀಸಲಿರಿಸಲಾಗಿತ್ತು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಕೊಠಡಿ ಕಾಯ್ದಿರಿಸಿದ್ದ ರಿಜಿಸ್ಟರ್ ಪಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಹತ್ಯೆಗೆ ಸುಪಾರಿ ನೀಡಿದ ಮೊತ್ತ ಹಾಗೂ ಅದರ ಮೂಲದ ತನಿಖೆಗೆ ಸಿಬಿಐ ಅಧಿಕಾರಿಗಳು ಪ್ರತ್ಯೇಕ ತಂಡ ರಚಿಸಿರುವುದಾಗಿ ಸಹ ಹೇಳಲಾಗಿದೆ. ಆರೋಪಿಗಳು ಇನ್ನೆರಡು ದಿನ ಸಿಬಿಐ ವಶದಲ್ಲಿರಲಿದ್ದಾರೆ.