ಕಲಬುರಗಿ: ಸರ್ಕಾರದ ನೆರವು ಪಡೆಯದೆ ಮುಧೋಳದಲ್ಲಿ ಸಾಹಿತ್ಯ ಸಮ್ಮೇಳನ ಮಾಡಿ ಯಶಸ್ವಿಯಾಗಿದ್ದೇನೆ. ಅದೇ ರೀತಿ ಕಲಬುರಗಿಯಲ್ಲೂ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಾದರಿಯಾಗಿ ನಡೆಸಿಕೊಡಲು ದಾನಿಗಳು ನೆರವಿನಹಸ್ತ ಚಾಚಬೇಕು ಎಂದು ಉಪ ಮುಖ್ಯಮಂತ್ರಿಯಾದ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಮನವಿ ಮಾಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಮ್ಮೇಳನ ತಯಾರಿ ಕುರಿತು ವಿವಿಧ ಸಮಿತಿಗಳು ಕೈಗೊಂಡಿರುವ ಕೆಲಸ ಕಾರ್ಯಗಳ ಸಿದ್ಧತೆ ಪರಿಶೀಲಿಸಿ ಮಾತನಾಡಿ, ಜಿಲ್ಲೆಯ ಸಿಮೆಂಟ್ ಮತ್ತು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು, ಪ್ರಮುಖ ಉದ್ಯಮಿಗಳು, ಶಿಕ್ಷಣ ಸಂಸ್ಥೆಯವರು ಅಗತ್ಯವಿರುವ ಸಹಾಯ, ಸಹಕಾರ ನೀಡಬೇಕು ಎಂದು ಕೋರಿದರು.
ಜಿಲ್ಲೆಯ ಪ್ರತಿಯೊಬ್ಬ ಶಾಸಕರು ತಮ್ಮ ಕ್ಷೇತ್ರಗಳಿಂದ 10 ಲಕ್ಷ ರೂ. ದೇಣಿಗೆ ಸಂಗ್ರಹಿಸಿಕೊಟ್ಟರೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಿ. ಕೈಗಾರಿಕೆಗಳು, ಸಹಾಯ ಮಾಡುವ ಉದ್ಯಮಿಗಳ ಪಟ್ಟಿಯನ್ನು ಡಿಸಿ ಇತರ ಅಧಿಕಾರಿಗಳು ಸೇರಿ ಸಿದ್ಧಪಡಿಸಿ ಪತ್ರ ಬರೆಯಿರಿ. ಅದರಲ್ಲಿ ಸಮ್ಮೇಳನ ಬ್ಯಾಂಕ್ ಖಾತೆ ಸಂಖ್ಯೆ ವಿವರ ಇರಲಿ. ನಾನು ಯಾರಿಗಾದರೂ ಮಾತನಾಡಿ ಎಂದರೆ ಮಾತನಾಡುತ್ತೇನೆ. ದಾನಿಗಳಿಂದ ಸಂಗ್ರಹಿಸಿದ ಬಳಿಕ ಕಡಿಮೆ ಬಿದ್ದ ಹಣವನ್ನು ಸರ್ಕಾರದಿಂದ ಕೊಡಲಾಗುವುದು. ಯಾವುದೇ ಕಾರಣಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಸಮ್ಮೇಳನ ಯಶಸ್ವಿಯಾಗಿ ನಡೆಯುವಂತೆ ಸಿದ್ಧತೆ ಕೆಲಸಗಳನ್ನು ಮಾದರಿ ಎನ್ನುವಂತೆ ಮಾಡಬೇಕು. ಸಾರಿಗೆ, ವಸತಿ, ಊಟ ಎಲ್ಲವನ್ನು ಅಚ್ಚುಕಟಾಗಿ ಮಾಡಿ ಎಂದು ತಾಕೀತು ಮಾಡಿದರು.
ವಿವಿಧ ಸಮಿತಿ ಕಾರ್ಯಾಧ್ಯಕ್ಷರಾದ ಡಾ.ರಾಜಾ ಪಿ, ಎಂ.ಎಂ. ವಾನತಿ, ರಮೇಶ ಸಂಗಾ, ರಿತೇಂದ್ರನಾಥ ಸೂಗೂರ, ಅಮೀನ್ ಮುಕ್ತಾರ್, ಶ್ರೀಶಕುಮಾರ ಇತರರು ಸಿದ್ಧತೆ ಕುರಿತು ಮಾಹಿತಿ ನೀಡಿದರು. ಸಮಿತಿಗಳ ಅಧ್ಯಕ್ಷರಾದ ಶಾಸಕರು ಕೆಲವು ಸಲಹೆ ನೀಡಿದರು.
ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಪ್ರಿಯಾಂಕ್ ಖರ್ಗೆ, ಎಂ.ವೈ. ಪಾಟೀಲ್, ಸುಭಾಷ ಗುತ್ತೇದಾರ್, ರಾಜಕುಮಾರ ಪಾಟೀಲ್ ತೆಲ್ಕೂರ, ಕನೀಜ್ ಫಾತಿಮಾ, ಡಾ.ಅವಿನಾಶ ಜಾಧವ್, ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಕಸಾಪ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ, ಡಿಸಿ ಬಿ.ಶರತ್, ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಹೆಚ್ಚುವರಿ ಡಿಸಿ ಡಾ.ಶಂಕರಪ್ಪ ವಣಿಕ್ಯಾಳ, ಈಶಾನ್ಯ ಸಾರಿಗೆ ಎಂಡಿ ಜಹೀರಾ ನಸೀಮ್, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಇತರರಿದ್ದರು.
ಸ್ವಯಂ ಸೇವಕರಿಗೆ 4000 ಟಿ ಶರ್ಟ್
ಕೊಡಲು ಬಿ.ಜಿ. ಪಾಟೀಲ್ ಒಪ್ಪಿಗೆ
ಸಮ್ಮೇಳನದ ವಿವಿಧ ಕೆಲಸಗಳಲ್ಲಿ ತೊಡಗುವ ವಿವಿಧ ಕಾಲೇಜುಗಳ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಮತ್ತು ಇತರ ಸ್ವಯಂ ಸೇವಕರಿಗೆ ಟಿ ಶರ್ಟ ಕೊಡುವಂತೆ ಡಿಸಿಎಂ ಗೋವಿಂದ ಕಾರಜೋಳ ಮಾಡಿದ ಮನವಿಗೆ ವಿಧಾನ ಪರಿಷತ್ ಸದಸ್ಯರಾದ ಎಸ್.ಬಿ. ಪಾಟೀಲ್ ಉದ್ಯಮಗಳ ಸಮೂಹದ ಮುಖ್ಯಸ್ಥ ಬಿ.ಜಿ. ಪಾಟೀಲ್ ಒಪ್ಪಿಗೆ ಸೂಚಿಸಿದರು. ಟಿ ಶರ್ಟ್ ಮೇಲೆ ನಿಮ್ಮ ಸಂಸ್ಥೆ ಗುರುತಿನ ಮಾಹಿತಿ ಮುದ್ರಣ ಇರಲಿ. ಮುಂಭಾಗದಲ್ಲಿ ಸಮ್ಮೇಳನ ಲಾಂಛನ ಇರುವಂತೆ ಸಿದ್ಧಪಡಿಸಿ ಕೊಡಿ ಎಂದರು. ಆಗ ಬಿ.ಜಿ.ಪಾಟೀಲ್ ಅವರು ತಮ್ಮ ಸಲಹೆಯಂತೆ ಮಾಡಿಕೊಡುವುದಾಗಿ ಹೇಳಿದರು. ಬಿ.ಜಿ.ಪಾಟೀಲ್ ಅವರಂಥ ದಾನಿಗಳು ಇನ್ನೂ ಅನೇಕರಿದ್ದಾರೆ. ಪ್ರಿಯಾಂಕ್ ಖಗರ್ೆ, ಸುಭಾಷ ಗುತ್ತೇದಾರ್ ಮೊದಲಾದವರು ಸಹ ಕೆಲವೊಂದು ಕೆಲಸದ ಹೊಣೆ ವಹಿಸಿಕೊಳ್ಳಬೇಕು ಎಂದು ಡಿಸಿಎಂ ಮನವಿ ಮಾಡಿದರು.