ಜೊಯಿಡಾ: ತಹಸೀಲ್ದಾರ್ ಸಂಜಯ ಕಾಂಬಳೆ ನೇತೃತ್ವದ ತಂಡ ತಾಲೂಕಿನ ವಿವಿಧೆಡೆ ಶನಿವಾರ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟ ಲಕ್ಷಾಂತರ ರೂ. ಮೌಲ್ಯದ ಉಸುಕು ವಶಕ್ಕೆ ಪಡೆಯಿತು.
ತಾಲೂಕಿನ ರಾಮನಗರ ಜಿಪಂ ವ್ಯಾಪ್ತಿಯ ಶಿಂಗರಗಾಂವ, ಜಗಲಪೇಟ, ಅಸು, ರಾಮನಗರ ಗ್ರಾಪಂ ವ್ಯಾಪ್ತಿಯ ಅಕ್ರಮ ಉಸುಕು ದಂಧೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಇತ್ತೀಚೆಗೆ ಜೊಯಿಡಾದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಅವರು ಉಸುಕು ತೆಗೆದು ಕೃಷಿ ಜಮಿನು ಹಾಳಾಗುತ್ತಿರುವ ಕುರಿತು ರೈತರಿಂದ ದೂರು ಬಂದಿವೆ. ಅಧಿಕಾರಿಗಳು ಕ್ರಮ ಕೈಗೊಳ್ಳದ ಕುರಿತು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ವೈಜಗಾಂವ, ಶಿಂಗರಗಾಂವ, ಕೂಡಲಗಾಂವ, ಆಮಶೇತ ಗ್ರಾಮಗಳ ಅರಣ್ಯ, ಮಾಲ್ಕಿ ಜಮೀನುಗಳಲ್ಲಿ ಸಂಗ್ರಹಿಸಿದ್ದ ಸುಮಾರು 42 ಬರಾಸ್ (120 ಕ್ಯೂಬಿಕ್ ಮೀಟರ್) ಮರಳನ್ನು ಜಪ್ತಿ ಮಾಡಿ, ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಪ್ರಮೋದ ಮೋರೆ, ಜಗಲಬೇಟ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಲಮಾಣಿ, ಲಕ್ಷಣ ವೇಳಿಪ, ಇತರರಿದ್ದರು.