ನೈತಿಕತೆ ಎಂಬುದು ಮನುಷ್ಯಜೀವನದಲ್ಲಿ ಹಾಸುಹೊಕ್ಕಾಗಿರಬೇಕು. ಒಬ್ಬರ ಸ್ವಭಾವವು ಇನ್ನೊಬ್ಬರದಕ್ಕಿಂತ ಬೇರೆಯದೇ ಆದ ನೈತಿಕತೆಯನ್ನು ಬಯಸುತ್ತದೆ. ದೈವೋಪಾಸನೆಯಿಂದ ಮೂಡುವ ನೈತಿಕತೆಯು ಕತ್ತಲ ಕೊಠಡಿಯಲ್ಲಿ ವಿಶಿಷ್ಟ ಸಂನ್ಯಾಸಿಗಳಿಗೆ ಹಾಗೂ ವಿರಾಗಿಗಳ ಸಮೂಹಕ್ಕೆ ಪ್ರಕಟವಾಗುವಷ್ಟು ಸೀಮಿತವಾದುದಲ್ಲ. ಬದಲಾಗಿ ಅವರ ನೈತಿಕತೆಯು ಎಲ್ಲ ಮನುಷ್ಯರ ಬದುಕಿನಲ್ಲಿ ಹಾಗೂ ಅದರ ಪ್ರತಿಯೊಂದು ಹಂತದಲ್ಲಿಯೂ ಇರಬೇಕಾಗುತ್ತದೆ.
ಒಬ್ಬ ವ್ಯಾಪಾರಿಯು ದೈವಭಕ್ತನಾಗಿದ್ದರೆ ಅವನ ವ್ಯಾಪಾರದಲ್ಲಿ ನೈತಿಕತೆ ಇರಬೇಕು. ಒಬ್ಬ ನ್ಯಾಯಾಧೀಶನು ದೈವಭಕ್ತನಾಗಿದ್ದರೆ ಅದು ನ್ಯಾಯಪೀಠದಲ್ಲಿ ಇರಬೇಕು. ಒಬ್ಬ ಪೊಲೀಸ್ ಅಧಿಕಾರಿಯು ದೈವಭಕ್ತನಾಗಿದ್ದರೆ ಅವನ ಕಾರ್ಯದಲ್ಲಿ ದೈವಭಕ್ತಿ ಪ್ರಕಟವಾಗಬೇಕು. ಹಾಗೆಯೇ ಒಂದು ದೇಶವು ದೈವಭಕ್ತಿಯದಾಗಿದ್ದರೆ – ಆ ದೇಶದ ನಾಗರಿಕರ ಜೀವನದಲ್ಲಿ, ಅದರ ಆಡಳಿತ ವ್ಯವಸ್ಥೆಯಲ್ಲಿ, ವಿದೇಶಾಂಗ ನೀತಿಯಲ್ಲಿ ಹಾಗೂ ಅದರ ಯುದ್ಧ ಮತ್ತು ಸಂಧಾನಗಳಲ್ಲಿ ದೈವಭಕ್ತಿಯ ನೈತಿಕತೆಯು ಪ್ರಕಟವಾಗಬೇಕು. ಇಲ್ಲದಿದ್ದರೆ ದೈವವಿಶ್ವಾಸ ಎಂಬುದು ಅನರ್ಥಕಾರಿ ಶಬ್ದವಾಗುವುದು.
ದೈವೋಪಾಸನೆಯು ಯಾವ ಬಗೆಯ ನೈತಿಕತೆಯನ್ನು ಬಯಸುತ್ತದೆ ಹಾಗೂ ಅದು ಮನುಷ್ಯನ ಪ್ರಾಯೋಗಿಕ ಜೀವನದಲ್ಲಿ ಮತ್ತು ವ್ಯಕ್ತಿಗತ ನಡವಳಿಕೆಯಲ್ಲಿ ಪ್ರಕಟವಾಗುವ ಬಗೆ ಹೇಗೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಇಲ್ಲಿ ಪ್ರವಾದಿ (ಸ) ಮುಹಮ್ಮದ್ ಪೈಗಂಬರ್ ಅವರ ಕೆಲವು ವಚನಗಳನ್ನು ನೀಡಲಾಗಿದೆ. ಅವುಗಳಿಂದ ಪೈಗಂಬರ್ (ಸ) ಅವರು ವ್ಯವಸ್ಥೆಗೊಳಿಸಿರುವ ಜೀವನಪದ್ಧತಿಯಲ್ಲಿ ವಿಶ್ವಾಸ, ನೈತಿಕತೆ ಹಾಗೂ ಕರ್ಮಗಳ ಸಂಯೋಜನೆಯು ಯಾವ ಸ್ವರೂಪದ್ದು ಎಂದು ನಾವು ಗ್ರಹಿಸಲು ಸಾಧ್ಯವಾಗುತ್ತದೆ.
ಈಮಾನ್ಗೆ (ಸತ್ಯವಿಶ್ವಾಸ) ಕೆಲವು ಶಾಖೆಗಳಿವೆ. ಮಾನವನು ದೇವರನ್ನು ಮಾತ್ರ ಆರಾಧಿಸಬೇಕು. ನಾಚಿಕೆ, ಸಹನೆ, ವಿಶಾಲ ಮನೋಭಾವಗಳು ಸತ್ಯವಿಶ್ವಾಸದ ಶಾಖೆಗಳಾಗಿವೆ. ಉಡುಪು ಹಾಗೂ ದೈಹಿಕ ಶುಚಿತ್ವಗಳು ಅರ್ಧ ಈಮಾನಿನ (ಸತ್ಯವಿಶ್ವಾಸ) ಭಾಗವಾಗಿದೆ.