More

    ಹೈನುಗಾರಿಕೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ – ಶಾಸಕ ಶಿವಾನಂದ ಪಾಟೀಲ ಹೇಳಿಕೆ

    ಆಲಮಟ್ಟಿ: ಹಳ್ಳಿಗಳು ಉದ್ಧಾರವಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

    ಗಣಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಿಕೆಪಿಎಸ್ ಕಟ್ಟಡದ ಅಡಿಗಲ್ಲು, ಗೋದಾಮು ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ಹಳ್ಳಿಗಳಿಂದ ದಿಲ್ಲಿ ಕಟ್ಟಬೇಕು. ದಿಲ್ಲಿಯಿಂದ ಹಳ್ಳಿಗಳನ್ನು ಕಟ್ಟಬಾರದು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಇದನ್ನು ಕೆಲವು ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಪಾಲಿಸಲಿಲ್ಲ. ಹೀಗಾಗಿ ಹಳ್ಳಿಗಳ ಉದ್ಧಾರಕ್ಕೆ ಶ್ರಮಿಸುವ ಪರಿಕಲ್ಪನೆ ಬರುತ್ತಿಲ್ಲ ಎಂದರು. ಹಿಂದೆ ಶೇ.80ರಷ್ಟು ಜನ ಹಳ್ಳಿಗಳಲ್ಲಿ 20ರಷ್ಟು ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಆದರೆ, ಇಂದು ಶೇ.60ರಷ್ಟು ಪಟ್ಟಣದಲ್ಲಿ, ಶೇ.40ರಷ್ಟು ಹಳ್ಳಿಗಳಲ್ಲಿ ಜನತೆ ವಾಸಿಸುತ್ತಿದ್ದಾರೆ ಎಂದರು.

    ಪ್ರಪಂಚದಲ್ಲಿ ಹಾಲು ಉತ್ಪಾದನೆಯಲ್ಲಿ ನಮ್ಮ ದೇಶ ಮೂರನೇ ಸ್ಥಾನದಲ್ಲಿದೆ. ಮುಂದೊಂದು ದಿನ ಪ್ರಥಮ ಸ್ಥಾನದಲ್ಲಿ ಬರಬಹುದು. ಪಿಕೆಪಿಎಸ್‌ನಿಂದ ಹೈನುಗಾರಿಕೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ರಾಜ್ಯದಲ್ಲಿ 21 ಶಾಖೆಗಳಿದ್ದು, ಇದರಲ್ಲಿ ವಿಜಯಪುರ ಶಾಖೆ ಒಂದರಿಂದ ಐದನೇ ಸ್ಥಾನ ಪಡೆಯುತ್ತಿದೆ. ಗಣಿ ಪಿಕೆಪಿಎಸ್ ಶಾಖೆಯಿಂದ ಅಂದಾಜು 1.75 ಕೋಟಿ ರೂ.ಗಳು ರೈತ ಸಾಲ ಮನ್ನಾ ಆಗಿದೆ ಎಂದರು.

    ಗಣಿ ಶಾಖೆಯಲ್ಲಿ 20 ಮಹಿಳಾ ಸ್ವಸಹಾಯ ಗುಂಪುಗಳಲ್ಲಿ 18 ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗಿದೆ. ಅಲ್ಲಲ್ಲಿ ದುಡ್ಡು ಬಚ್ಚಿಡುವುದನ್ನು ಬಿಟ್ಟು ಸೊಸೈಟಿಗಳಲ್ಲಿಟ್ಟ ತಮ್ಮ ದುಡ್ಡನ್ನು ದುಡಿಸಿ ಬೆಳೆಸಿ ಕೊಡಲಾಗುವುದು ಎಂದರು.

    ಎಪಿಎಂಸಿ ವತಿಯಿಂದ 22ಲಕ್ಷ ರೂ.ಗಳಲ್ಲಿ ನಿರ್ಮಿಸಿರುವ ಗೋದಾಮನ್ನು ಗಣಿ ಪಿಕೆಪಿಎಸ್‌ಗೆ ಹಸ್ತಾಂತರಿಸಲಾಯಿತು. ಪಿಕೆಪಿಎಸ್ ಅಧ್ಯಕ್ಷ ಸಂಜೀವಕುಮಾರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.

    ಬಸಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಬಳಬಟ್ಟಿ, ಭರತರಾಜ ದೇಸಾಯಿ, ವಿಠಲ ಪವಾರ, ಶೇಖಪ್ಪ ಬೀರಲದಿನ್ನಿ, ಚನ್ನಪ್ಪ ಪವಾರ, ಸಿ.ಬಿ.ಪಾಟೀಲ, ಬಸನಗೌಡ ನರಸನಗೌಡರ, ತಾನಾಜಿ ನಾಗರಾಳ, ರಾಮು ಜಗತಾಪ, ಭದ್ರು ನಿಡಗುಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts