ಹೈದರಾಬಾದ್: ಫೋಟೋ ಪೋಸ್ಗಾಗಿ ಹಾವನ್ನು ಕೊರಳಿಗೆ ಸುತ್ತಿಕೊಂಡಾತನ ಜೀವನವೇ ಕ್ಲೋಸ್ ಆದಂಥ ಪ್ರಕರಣವಿದು. ಹಾವಾಡಿಗನೊಬ್ಬನಿಂದ ಹಾವನ್ನು ಪಡೆದು ಫೋಟೋಗೆಂದು ಅದನ್ನು ಕೊರಳಿಗೆ ಸುತ್ತಿಕೊಂಡಾತ ಮರಳಿ ಅದನ್ನು ತೆಗೆಯುವಾಗ ಹಾವಿನ ಕಡಿತಕ್ಕೆ ಒಳಗಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಆಂಧ್ರಪ್ರದೇಶದ ಪೊಟ್ಟಿಶ್ರೀರಾಮುಲು ನೆಲ್ಲೂರು ಜಿಲ್ಲೆಯ ಕಂಡುಕೂರು ಎಂಬಲ್ಲಿ ಈ ಘಟನೆ ನಡೆದಿದೆ. ಜ್ಯೂಸ್ ಶಾಪ್ ನಡೆಸುತ್ತಿದ್ದ ಮಣಿಕಂಠ ರೆಡ್ಡಿ ಎಂಬಾತ ಸಾವಿಗೀಡಾದ ವ್ಯಕ್ತಿ. ಆರ್ಟಿಸಿ ಡಿಪೊ ಬಳಿ ಹಾವಾಡಿಗ ಹಾವಾಡಿಸುತ್ತಿದ್ದಾಗ ಬಂದ ಈತ ಆತನಿಂದ ಹಾವನ್ನು ಕೇಳಿ ಪಡೆದಿದ್ದ.
ಹಾವನ್ನು ಕೊರಳಿಗೆ ಸುತ್ತಿಕೊಂಡು ಬೇರೆಯವರ ಬಳಿ ಫೋಟೋ ತೆಗೆಯಲು ಹೇಳಿದ್ದ ಈತ ಕತ್ತಿನಿಂದ ತೆಗೆಯುವಾಗ ಹಾವಿನ ಕಡಿತಕ್ಕೆ ಒಳಗಾಗಿದ್ದಾನೆ. ತಕ್ಷಣ ಸ್ಥಳೀಯರು ಈತನನ್ನು ಆಸ್ಪತ್ರೆಗೆ ಕರೆದೊಯ್ದರೂ ಈತನನ್ನು ಚಿಕಿತ್ಸೆ ಫಲಿಸಲಿಲ್ಲ. ಪರಿಣಾಮವಾಗಿ ಶಿವನ ಪೋಸ್ ಕೊಡಲು ಹೋದಾತ ಶವವಾಗಿದ್ದಾನೆ.
ಹಾವಾಡಿಗ ನಗುಲುರಿ ವೆಂಕಟ ಸ್ವಾಮಿ (30) ಬಳಿ ಕೇಳಿದಾಗ ಆತ ಹಾವಿನ ಹಲ್ಲು ತೆಗೆಯಲಾಗಿದೆ ಎಂದಿದ್ದ. ಆ ಬಳಿಕ ಮಣಿಕಂಠ ಹಾವನ್ನು ಕುತ್ತಿಗೆಗೆ ಸುತ್ತಿಕೊಳ್ಳಲು ಧೈರ್ಯ ಮಾಡಿದ್ದ ಎನ್ನಲಾಗಿದೆ. ಮಣಿಕಂಠ ಸಾವನ್ನು ವೈದ್ಯರು ಘೋಷಿಸಿದ ಬೆನ್ನಿಗೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತನಗೆ ತಾನೇ ಶ್ರದ್ಧಾಂಜಲಿ ಸ್ಟೇಟಸ್ ಹಾಕೊಂಡವನ ಶವ ಮರದಲ್ಲಿ ನೇತಾಡುತ್ತಿತ್ತು!
ಒಮ್ಮೆಗೇ 103 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ; ನಿಮ್ಮ ಏರಿಯಾಗೆ ಯಾರು? ಇಲ್ಲಿದೆ ಪೂರ್ತಿ ಪಟ್ಟಿ