ನವದೆಹಲಿ : ಕರೊನಾ ಪರಿಹಾರ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ಇಂಡಿಯನ್ ಯೂತ್ ಕಾಂಗ್ರೆಸ್(ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರನ್ನು ದೆಹಲಿ ನಗರ ಅಪರಾಧ ವಿಭಾಗದ ಪೊಲೀಸರು ಇಂದು ವಿಚಾರಣೆ ಮಾಡಿದರು. ಕರೊನಾ ಔಷಧಿಗಳ ಕಾನೂನುಬಾಹಿರ ವಿತರಣೆಯ ಆರೋಪದ ಹಿನ್ನೆಲೆಯಲ್ಲಿ ನಗರದ ಐವೈಸಿ ಕಛೇರಿಗೆ ಹೋಗಿ ಶ್ರೀನಿವಾಸ್ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು ಎನ್ನಲಾಗಿದೆ.
“ಡಾ.ದೀಪಕ್ ಸಿಂಗ್ ಎಂಬುವರು ಕೋವಿಡ್ ಔಷಧಿಗಳ ಕಾನೂನುಬಾಹಿರ ವಿತರಣೆ ಮುಂತಾಗಿ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶಿಸಿದೆ. ನ್ಯಾಯಾಲಯದ ಈ ನಿರ್ದೇಶನಗಳ ಪ್ರಕಾರ ಹಲವಾರು ಸಂಬಂಧಿತ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ” ಎಂದು ದೆಹಲಿ ಪೊಲೀಸ್ ವಕ್ತಾರ ಚಿನ್ಮಯ್ ಬಿಸ್ವಲ್ ಹೇಳಿದ್ದಾರೆ.
ಇದನ್ನೂ ಓದಿ: ಕೆಲಸ ಮಾಡುವವರೇ ತಪ್ಪು ಮಾಡುವುದು : ಅನುಪಂ ಖೇರ್ ಮಾರ್ಮಿಕ ನುಡಿ
ಹೃದಯ ಫೌಂಡೇಶನ್ ಎಂಬ ನಾನ್ಪ್ರಾಫಿಟ್ ಸಂಸ್ಥೆಯ ಅಧ್ಯಕ್ಷರಾಗಿರುವ ದೀಪಕ್ ಸಿಂಗ್ ಅವರು, ಮೆಡಿಕಲ್ ಮಾಫಿಯ ಮತ್ತು ರಾಜಕಾರಣಿಗಳ ನಡುವೆ ನಂಟಿದ್ದು, ಕರೊನಾ ಔಷಧಿಗಳ ಅಕ್ರಮ ವಿತರಣೆಯಲ್ಲಿ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ದೂರಿ ಸಿಬಿಐ ತನಿಖೆ ಕೋರಿದ್ದರು. ಮೇ 4 ರಂದು ದೆಹಲಿ ಹೈಕೋರ್ಟ್, ಈ ಬಗ್ಗೆ ಮೊದಲು ದೆಹಲಿ ಪೊಲೀಸ್ ಕಮಿಷನರ್ಗೆ ದೂರು ಸಲ್ಲಿಸಬೇಕೆಂದು ಸೂಚಿಸಿತ್ತು ಎನ್ನಲಾಗಿದೆ.
ನಂತರದಲ್ಲಿ ಸಿಂಗ್ ಅವರು, ಎಎಪಿ ಶಾಸಕ ದಿಲೀಪ್ ಪಾಂಡೆ, ಐಎನ್ಸಿಯ ಬಿ.ವಿ.ಶ್ರೀನಿವಾಸ್, ಬಿಜೆಪಿ ಸಂಸದರಾದ ಗೌತಮ್ ಗಂಭೀರ್ ಮತ್ತು ಸುಜಯ್ ವೀಖೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮತ್ತು ಕಾಂಗ್ರೆಸ್ ಶಾಸಕ ಮುಕೇಶ್ ಶರ್ಮ ಅವರ ಹೆಸರುಗಳನ್ನು ಬರೆದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೆಹಲಿ ಕಮಿಷನರ್ ಎಸ್.ಎನ್.ಶ್ರೀವಾಸ್ತವ ಅವರು ಅಪರಾಧ ವಿಭಾಗದ ತಂಡವೊಂದಕ್ಕೆ ಈ ವಿಚಾರಣೆಯ ಜವಾಬ್ದಾರಿ ವಹಿಸಿದೆ. ಈ ಮುನ್ನ ಎಎಪಿ ಶಾಸಕ ದಿಲೀಪ್ ಪಾಂಡೆ ಅವರನ್ನು ಪೊಲೀಸ್ ತಂಡ ವಿಚಾರಣೆ ನಡೆಸಿತ್ತು ಎನ್ನಲಾಗಿದೆ. (ಏಜೆನ್ಸೀಸ್)
ಗೋವಾ ಆಕ್ಸಿಜನ್ ಗೊಂದಲ : ಒಂದೇ ಆಸ್ಪತ್ರೆಯಲ್ಲಿ 4 ದಿನಗಳಲ್ಲಿ 74 ಸಾವು