ಚನ್ನಪಟ್ಟಣ
ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯಾದ ಕೆಲಸವನ್ನು ತಾನು ಮಾಡಿಸುವ ಮೂಲಕ ಸಾರ್ವಜನಿಕನೊರ್ವ ಇಲಾಖೆಗೆ ಛೀಮಾರಿ ಹಾಕುವ ಜೊತೆಗೆ, ಸಮಾಜಕ್ಕೆ ಮಾದರಿಯಾಗಿದ್ದಾರೆ.
ಮಂಗಾಡಹಳ್ಳಿ ಗ್ರಾಮದ ಎಂ.ಜೆ.ಮಹೇಶ್ ಇಲಾಖೆಗೆ ಛೀಮಾರಿ ಹಾಕುವ ಜೊತೆಗೆ ಮಾದರಿ ಕೆಲಸ ಮಾಡಿರುವ ಸಾರ್ವಜನಿಕ. ಚನ್ನಪಟ್ಟಣ ಮತ್ತು ಹಲಗೂರು ಮುಖ್ಯರಸ್ತೆಯಲ್ಲಿರುವ ಮಂಗಾಡಳ್ಳಿ ಬಳಿಯ ಇರುವ ಮುಳ್ಳಿಕೆರೆ ಏರಿ ರಸ್ತೆಯ ಎರಡು ಬದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದುಕೊಂಡಿದ್ದವು.
ಇವುಗಳ ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆ ಜಾಣಕುರುಡುತನ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಎಂ.ಜೆ. ಮಹೇಶ್ ತಮ್ಮ ಸ್ನೇಹಿತರ ಜೊತೆಗೂಡಿ, ರಸ್ತೆ ಬದಿಯಲ್ಲಿನ ಜಂಗಲ್ ಕ್ಲಿನಿಂಗ್ ( ಗಿಡಗಂಟಿಗಳ ತೆರವು) ಅನ್ನು ತನ್ನ ಸ್ವಂತ ಹಣದಿಂದ ಮಾಡಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಇದು ಚನ್ನಪಟ್ಟಣ ಹಾಗೂ ಹಲಗೂರು ಮುಖ್ಯರಸ್ತೆಯಾಗಿದ್ದು, ಕೋಡಂಬಳ್ಳಿ, ಇಗ್ಗಲೂರು ಸೇರಿದಂತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಮಂಗಾಡಹಳ್ಳಿ ಹಾಗೂ ವಿರುಪಾಕ್ಷಿಪುರ ಗ್ರಾಮದ ಮಧ್ಯೆದಲ್ಲಿರುವ ಮುಳ್ಳಿಕೆರೆಯ ಎರಡು ಬದಿಯಲ್ಲಿ ಸಾಕಷ್ಟು ಗಿಡಗಂಟಿಗಳು ಬೆಳೆದುಕೊಂಡಿದ್ದ ಹಿನ್ನೆಲೆಯಲ್ಲಿ, ಸಂಚಾರ ಸಮಸ್ಯೆ ಉಂಟಾಗಿತ್ತು. ರಸ್ತೆಗೆ ಜಂಗಲ್ ಚಾಚಿಕೊಂಡಿದ್ದ ಹಿನ್ನೆಲೆಯಲ್ಲಿ ರಸ್ತೆಯ ತಿರುವಿನಲ್ಲಿ ಅಪಘಾತಗಳು ಸಹ ನಡೆಯುತ್ತಿದ್ದವು.
ಕಳೆದ 15 ದಿನಗಳಿಂದ ನಿರಂತರ ಅಪಘಾತಗಳು ಸಂಭವಿಸಿದ ಹಿನ್ನೆಲೆಯಲ್ಲಿ, ಮಂಗಾಡಹಳ್ಳಿ ಗ್ರಾಮದ ಮಹೇಶ್, ಶುಕ್ರವಾರ ತನ್ನ ಸ್ವಂತ ಹಣ ಭರಿಸಿ ಜೆಸಿಬಿ ವಾಹನವನ್ನು ಬಾಡಿಗೆಗೆ ಪಡೆದು, ರಸ್ತೆಯ ಎರಡು ಬದಿಯಲ್ಲಿ ಬೆಳೆದುನಿಂತಿದ್ದ ಗಿಡಗಂಟಿಗಳನ್ನು ಸ್ವಚ್ಚಗೊಳಿಸಿದ್ದಾರೆ. ಇವರ ಸಾಮಾಜಿಕ ಕಳಕಳಿಗೆ ಸ್ನೇಹಿತರು ಸಹ ಸಾಥ್ ನೀಡಿದ್ದಾರೆ.