ಬೆಂಗಳೂರು: ರಾಜ್ಯದ ರಾಜಕೀಯದ ಬಗ್ಗೆ ಇಂದು ಸಂಜೆ ಬೆಂಗಳೂರಿನಲ್ಲಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗಿದ್ದರೆ, ಮತ್ತೊಂದೆಡೆ ವಿವಾದಕ್ಕೆಡೆ ಮಾಡಿಕೊಟ್ಟಿದ್ದ ಸಚಿವ ಸಿ.ಪಿ,ಯೋಗೇಶ್ವರ್ ಸಂಜೆ 5.15 ರ ವೇಳೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ಹೊರಟ ಸಂದರ್ಭದಲ್ಲಿ ಯೋಗೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷದ ಕಚೇರಿಗೆ ತೆರಳುತ್ತೀನಿ, ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಭೇಟಿ ಮಾಡ್ತೀನಿ ಎಂದು ಹೇಳಿ ಹೊರಟರು. “ನೇರವಾಗಿ ಅರುಣ್ ಸಿಂಗ್ ಸಭೆಗೆ ಹೋಗ್ತೀನಿ. ಸಭೆಯಲ್ಲಿ ನಾನು ಏನು ಹೇಳಬೇಕೋ ಅದನ್ನ ಹೇಳ್ತೀನಿ. ಎಲ್ಲಾ ಸರಿ ಹೋಗಬಹುದು. ರಾಜಕೀಯವಾಗಿ ನಾನು ಏನೂ ಮಾತಾಡೊಲ್ಲ. ಎಲ್ಲವನ್ನು ಅರುಣ್ ಸಿಂಗ್ ಮುಂದೆ ಹೇಳ್ತೀನಿ” ಎಂದರು.
ಜೊತೆಗೆ ತಾವು ದೆಹಲಿಗೆ ಹೋಗಿರಲಿಲ್ಲ ಎಂದು ಯೋಗೇಶ್ವರ್, “ವೈಯಕ್ತಿಕ ಕೆಲಸಕ್ಕೆ ಹೈದ್ರಾಬಾದ್ಗೆ ತೆರಳಿದ್ದೆ. ಯಾವ ನಾಯಕರನ್ನೂ ನಾನು ಭೇಟಿಯಾಗಿಲ್ಲ. ಹವಾಮಾನ ವೈಪರೀತ್ಯದಿಂದ ಒಂದು ಗಂಟೆ ಫ್ಲೈಟ್ ತಡ ಆಯ್ತು” ಎಂದರು. ರಾಜಕೀಯ ಹವಾಮಾನ ವೈಪರೀತ್ಯ ಸರಿ ಹೋಗುತ್ತಾ ಸರ್ ಅನ್ನೋ ಪ್ರಶ್ನೆಗೆ ನಕ್ಕು ಸುಮ್ಮನೆ ಹೊರಟರು, ಯೋಗೇಶ್ವರ್.