ಶಿವಮೊಗ್ಗ: ಹಿಂದುತ್ವವಾದಿಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೋಸ ಮಾಡಿದ್ದಾರೆ. ಬಿಎಸ್ವೈ ಹಿಡಿತದಲ್ಲಿ ಪಕ್ಷ ಸಿಲುಕಿ ಒದ್ದಾಡುತ್ತಿದೆ. ನನ್ನ ನಿರ್ಧಾರ ವಾಪಸ್ ಪಡೆಯಲ್ಲ. ಬಂಡಾಯ ಸ್ಪರ್ಧೆ ಎಂದ ಮೇಲೆ ಹಿಂದೆ ಸರಿಯಲ್ಲ. ಪಕ್ಷೇತರ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಿಜೆಪಿ ನಾಯಕರಿಂದ ಈಶ್ವರಪ್ಪ ಸಂಧಾನ ಸರ್ಕಸ್ ವಿಫಲ..!
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಎಂಎಲ್ಸಿ ರವಿಕುಮಾರ್, ಅರುಣ್ ನನ್ನ ಮನೆಗೆ ಬಂದಿದ್ರು. ಯಾವ ಕಾರಣಕ್ಕೆ ನನ್ನ ಸ್ಪರ್ಧೆ ಎಂದು ಅವರಿಗೆ ಮಾಹಿತಿ ನೀಡಿದ್ದೇನೆ. ನನ್ನ ಮಗನಿಗೆ ಟಿಕೆಟ್ ಸಿಗದಿರುವುದು ಒಂದೇ ಕಾರಣ ಅಲ್ಲ. ಹಿಂದುತ್ವವಾದಿಗಳಿಗೆ ಟಿಕೆಟ್ ತಪ್ಪಿಸಿ ಮೋಸ ಮಾಡಿದ್ದಾರೆ ಎಂದು ಹೇಳಿದರು.
ಯತ್ನಾಳ್, ಸಿಟಿ ರವಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಏಕೆ ಮಾಡಲಿಲ್ಲ: ಯಡಿಯೂರಪ್ಪ ಹಿಡಿತದಲ್ಲಿ ಬಿಜೆಪಿ ಪಕ್ಷ ಸಿಲುಕಿದೆ. ಲಿಂಗಾಯತ ನಾಯಕ ಯತ್ನಾಳ್, ಸಿಟಿ ರವಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಏಕೆ ಮಾಡಲಿಲ್ಲ. ಎಂಪಿ ಸ್ಥಾನಕ್ಕೆ ಸೀಟಿ ರವಿಗೆ ಟಿಕೆಟ್ ಕೊಡಬಹುದಾಗಿತ್ತು. ಬಿಎಸ್ವೈಗೆ ಲಿಂಗಾಯತರು, ಒಕ್ಕಲಿಗರು, ಹಿಂದುಳಿದವರು ಬೇಡ ಎಂದು ಕಿಡಿಕಾರಿದರು.
ಪಕ್ಷ ಅಂದರೆ ತಾಯಿ, ತಾಯಿಯ ಕತ್ತು ಹಿಸುಕುತ್ತಿದ್ದಾರೆ: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗೋಬ್ಯಾಕ್ ಅಭಿಯಾನ ನಡೆದರೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿಗೆ ಟಿಕೆಟ್ ಯಾಕೆ ಕೊಡಿಸಲಿಲ್ಲ. ಪಕ್ಷವನ್ನ ಯಡಿಯೂರಪ್ಪ ಕಪಿಮುಷ್ಟಿಯಿಂದ ಮುಕ್ತಗೊಳಿಸಬೇಕು. ಪಕ್ಷ ಅಂದರೆ ತಾಯಿ, ತಾಯಿಯ ಕತ್ತು ಹಿಸುಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲರೂ ಕರೆಮಾಡಿ ನೀವು ಸ್ಪರ್ಧಿಸಬೇಕೆಂದು ಹೇಳುತ್ತಿದ್ದಾರೆ. ಎಲ್ಲ ಮೋರ್ಚಾದವರು ನನಗೆ ಕರೆ ಮಾಡುತ್ತಿದ್ದಾರೆ. ನೀವು ಚುನಾವಣಾ ನಿವೃತ್ತಿ ತೆಗೆದುಕೊಳ್ಳಬೇಡಿ ಅಂತಿದ್ದಾರೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ಅಲ್ಲದೆ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ನಾವು ದಿನನಿತ್ಯ ಕಾಂಗ್ರೆಸ್ ಪಕ್ಷವನ್ನ ಟೀಕೆ ಮಾಡುತ್ತಿದ್ದೇವೆ. ಆದರೆ, ರಾಜ್ಯದಲ್ಲಿ ಬಿಜೆಪಿ ಕುಟುಂಬದ ಕೈಯಲ್ಲಿ ಸಿಲುಕಿದೆ ಎಂದರು.
ನನ್ನ ಮಗನಿಗೆ ಟಿಕೆಟ್ ನೀಡಿದೆ ಮೋಸ ಮಾಡಿದ್ದಾರೆ. ತುಂಬಾ ನಾಯಕರಿಗೆ ಮೋಸ ಆಗಿದೆ. ಅವರಿಗೆ ಟಿಕೆಟ್ ಕೈತಪ್ಪಿಸಿದ್ದಾರೆ. ಕುಟುಂಬದ ಹಿಡಿತದಲ್ಲಿ ಪಕ್ಷ ಇದೆ. ಯಡಿಯೂರಪ್ಪ ಅವರ ಮೇಲೆ ವರಿಷ್ಠರು ನಂಬಿಕೆ ಇಟ್ಟಿದ್ದಾರೆ. ದೊಡ್ಡ ನಾಯಕರು ಎನ್ನುವ ಭ್ರಮೆಯಲ್ಲಿ ವರಿಷ್ಠರು ಇದ್ದಾರೆ. ಹಠ ಹಿಡಿದು ಮಗನಿಗೆ ರಾಜ್ಯಾಧ್ಯಕ್ಷ ಕೊಡಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ನಾನು ಕೊನೆಯವರೆಗೆ ಪಕ್ಷ ತಾಯಿ ಅಂತಾ ನಂಬಿದ್ದೇನೆ. ಪಕ್ಷ ಸೂಚನೆಯಂತೆ ನಾನು ನಡೆದುಕೊಂಡು ಬಂದಿದ್ದೇನೆ. ಈಗ ನಾನೂ ಸ್ಪರ್ಧೆ ಮಾಡುವ ಉದ್ದೇಶ ಕಪಿಮುಷ್ಠಿಯಿಂದ ಪಕ್ಷ ಹೊರಗೆ ಬರಬೇಕು. ಅಪ್ಪ ಮಕ್ಕಳ ಕೈಗೆ ಸಿಕ್ಕು ಪಕ್ಷ ಒದ್ದಾಡುತ್ತಿದೆ. ಯಡಿಯೂರಪ್ಪ ಕುಟುಂಬ ರಾಜಕಾರಣದಿಂದ ಪಕ್ಷ ಮುಕ್ತವಾಗಬೇಕಿದೆ ಎಂದರು.
ಲೋಕಸಭೆ ಚುನಾವಣೆ: ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ! ಇಲ್ಲಿದೆ ಹೆಚ್ಚಿನ ಮಾಹಿತಿ