ಯಲಬುರ್ಗಾ: ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಇಲ್ಲದ ಕಾರಣ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿ ಸಾರಿಗೆ ಸಂಚಾರ ಆರಂಭಕ್ಕೆ ಅನುಮತಿ ನೀಡಿದೆ.
ಕಳೆದ ವಾರದಿಂದ ಸರ್ಕಾರದ ಆದೇಶದಂತೆ ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಆರಂಭವಾಗಿರುವ ಬಸ್ ಸಂಚಾರಕ್ಕೆ ಪ್ರಯಾಣಿಕರ ನಿರುತ್ಸಾಹ ಎದ್ದು ಕಾಣುತ್ತಿದೆ. ಇದರಿಂದ ಇಲಾಖೆಯ ಆದಾಯ ಕುಂಠಿತವಾಗಿದೆ.
ಯಲಬುರ್ಗಾ ಸಾರಿಗೆ ಘಟಕದಿಂದ ನಿತ್ಯ ಮೂರು ಬಸ್ ಸಂಚಾರ ನಡೆಸುತ್ತಿವೆ. ಯಲಬುರ್ಗಾದಿಂದ ಕುಕನೂರಿಗೆ ನಿಲುಗಡೆ ಇದ್ದು, ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ತೆರಳಿ ವಾಪಸ್ ಬರುತ್ತವೆ. ಸಾರ್ವಜನಿಕರ ಅನುಕೂಲಕ್ಕಾಗಿ ಯಲಬುರ್ಗಾ ಘಟಕದಿಂದ ಕುಷ್ಟಗಿ-ಗಂಗಾವತಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದರಿಂದ ಸಂಚಾರ ಸ್ಥಿತಗೊಳಿಸಲಾಗಿದೆ.
3 ಬಸ್ 3 ಬಾರಿ ಸಂಚಾರ
ತಾಲೂಕು ಘಟಕದಿಂದ ಜಿಲ್ಲಾ ಕೇಂದ್ರಕ್ಕೆ ನಿತ್ಯ ಬೆಳಗ್ಗೆ 7 ರಿಂದ ಸಂಜೆ 7ರ ವರೆಗೆ 3 ಬಸ್ ದಿನಕ್ಕೆ 3 ಬಾರಿ ಸಂಚರಿಸುತ್ತಿವೆ. ಕುಕನೂರಿನಿಂದಲೂ ಜಿಲ್ಲಾ ಕೇಂದ್ರಕ್ಕೆ 3 ಬಸ್ ಸಂಚಾರ ನಡೆಸತ್ತಿವೆ. ಒಂದು ಬಸ್ನಲ್ಲಿ 22 ಜನರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಾಗಿದೆ. 22 ಜನ ಭರ್ತಿಯಾಗಲು ಎರಡರಿಂದ 3 ತಾಸು ನಿಲ್ದಾಣದಲ್ಲಿ ಬಸ್ ನಿಲ್ಲಬೇಕಾದ ಪರಿಸ್ಥಿತಿ ಇದೆ. ಅಷ್ಟೊಂದು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಕರೊನಾ ಭೀತಿ ಮುಂಚೆ ದಿನಕ್ಕೆ ಬಸ್ವೊಂದರ ಆದಾಯ 9 ಸಾವಿರ ರೂ ಇತ್ತು. ಈಗ 2 ಸಾವಿರ ಆದಾಯ ಗಳಿಕೆಯಾಗುತ್ತಿದೆ. ಇದರಿಂದ ಸಾರಿಗೆ ಇಲಾಖೆ ನಷ್ಟ ಅನುಭವಿಸುತ್ತಿದೆ.