More

    ಮನುಷ್ಯರನ್ನು ದ್ವೇಷಿಸುವವರು ರಾಕ್ಷಸರು: ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ

    ಯಲಬುರ್ಗಾ: ಮನುಷ್ಯರನ್ನು ದ್ವೇಷಿಸುವವರು ರಾಕ್ಷಸರು. ಅವರು ಮನುಷ್ಯರಾಗಲು ಅರ್ಹರಲ್ಲ. ಹುಟ್ಟಿದ ಮೇಲೆ ಸಾಯಲೇಬೇಕು. ಆದರೆ, ಬದುಕಿರುವಾಗ ನಾಡು-ನುಡಿ, ನೆಲ-ಜಲ, ಭಾಷೆಗಾಗಿ ಏನಾದರೂ ಮಾಡಬೇಕು. ಅದು ಬಿಟ್ಟು ಇನ್ನೊಬ್ಬರನ್ನು ಸಾಯಿಸೋಣ ಎಂಬ ಸಂಸ್ಕೃತಿ ಬೆಳೆಸಿಕೊಳ್ಳಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

    ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಬೀರಲಿಂಗೇಶ್ವರ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪವಾಸ ಮಾಡುವವರು ಮಾತ್ರ ಭಕ್ತರಲ್ಲ. ಶುದ್ಧ ಭಕ್ತಿ ಇದ್ದವರು ನಿಜ ಭಕ್ತರು. ಇನ್ನೊಬ್ಬರಿಗೆ ಕೆಡಕು ಬಯಸದೆ, ಅವರಲ್ಲಿ ದೇವರನ್ನು ಕಂಡರೆ ಸಾಕು. ಸತ್ಯವೇ ದೇವರು. ಆಚಾರವೇ ಸ್ವರ್ಗ. ಅನಾಚಾರವೇ ನರಕ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡರೆ ನಾವೆಲ್ಲ ಒಂದೇ ತಾಯಿ ಮಕ್ಕಳಂತೆ ಇರಲು ಸಾಧ್ಯ. ನಾವು ಸಿಎಂ, ಸಚಿವ, ಶಾಸಕರಾಗುವುದು ರಾಜ್ಯದ ಜನರ ಮಾನ, ಪ್ರಾಣ, ಆಸ್ತಿ, ಜನರ ಕಲ್ಯಾಣ ಮಾಡಲು. ಆದರೆ ಸಚಿವ ಅಶ್ವತ್ಥ ನಾರಾಯಣನಂಥವರು ಯಾವುದೋ ಸಿದ್ಧಾಂತಕ್ಕೆ ಅಂಟಿಕೊಂಡು ನನ್ನನ್ನು ಸಾಯಿಸುವ ಮಾತನಾಡುತ್ತಾರೆ. ಸ್ವಾರ್ಥಕ್ಕಾಗಿ ನಮ್ಮಲ್ಲೇ ಜಗಳ ಹಚ್ಚುತ್ತಾರೆ. ಕೆಟ್ಟವರ ಜತೆ ಇರಬೇಡಿ. ಒಳ್ಳೆಯವರ ಜೊತೆಗಿರಿ. ರಾಯರಡ್ಡಿಗೆ ಮತ ಕೇಳಲು ಮತ್ತೊಮ್ಮೆ ಬರುವೆ ಎಂದರು.

    ಕಾಗಿನೆಲೆ ಕನಕಗುರು ಪೀಠದ ಸಿದ್ಧರಾಮನಂದಪುರಿ ಸ್ವಾಮೀಜಿ ಮಾತನಾಡಿ, ಶ್ರೀ ಬೀರಲಿಂಗೇಶ್ವರ ದೇವಾಲಯ ಅಭಿವೃದ್ಧಿಗೆ ಎಲ್ಲರೂ ತಮ್ಮಿಂದಾದ ಧನ ಸಹಾಯ ಮಾಡಿದ್ದಾರೆ. ರಾಜ್ಯಾದ್ಯಂತ ಬೀರದೇವರು, ರೇವಣಸಿದ್ಧ ಮುಂತಾದವುಗಳ ಭಕ್ತರ ಸುಪರ್ದಿಯಲ್ಲಿಲ್ಲ. ಸರ್ಕಾರ ದೇವಾಲಯಗಳನ್ನು ಭಕ್ತರಿಗೆ ಒಪ್ಪಿಸಬೇಕು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಈ ಕೆಲಸ ಮಾಡಲಿ. ಇಂದು ಧರ್ಮವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಶಿವನೇ ನಮ್ಮ ಆರಾಧಕ. ಆತನಿಗೆ ಆಹಾರ ಪದ್ಧತಿ, ಜಾತಿ ಇಲ್ಲ. ಮಂತ್ರಘೋಷಗಳು ಬೇಕಿಲ್ಲ. ಇದೇ ನಿಜವಾದ ಹಿಂದು ಸಂಸ್ಕೃತಿ. ವೀರನಗೌಡ ಉತ್ತಮ ಹುದ್ದೆಗಳಿಗೆ ಹೋಗಬೇಕು. ಅವರನ್ನು ಬಳಸಿಕೊಂಡವರು ಬೆಳೆಸುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಅಪಾಯಕಾರಿ ಬೆಳವಣಿಗೆಗಳಾಗುತ್ತಿವೆ. ಕಾನೂನು ಕಾಯಬೇಕಾದ ಶಾಸಕ, ಸಚಿವರು ಕೊಲೆ ಮಾಡುವ ಮಾತಾಡುತ್ತಿದ್ದಾರೆ. ಅಂಥ ನಾಲಾಯಕರನ್ನ ಜನ ಆಯ್ಕೆ ಮಾಡಬಾರದು ಎಂದರು.

    ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಹಾಲುಮತ ಸಮಯದಾಯದವರು ಪ್ರಾಮಾಣಿಕ ಮನಸ್ಸಿನವರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಈ ಸಮುದಾಯದವರಿದ್ದಾರೆ. ಭಕ್ತಿಪಂಥಕ್ಕೆ ಕನಕದಾಸರ ಕೊಡುಗೆ ಅಪಾರ. ಕನಕದಾಸರ ಆಶಯದಂತೆ ಸಿದ್ದರಾಮಯ್ಯ ಬದುಕುತ್ತಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಧೀಮಂತ ರಾಯಣ್ಣ. ಶಾಸಕ ಬೈರತಿ ಸುರೇಶ ಸಿದ್ದರಾಮಯ್ಯ ಹಾಗೂ ನನ್ನ ಮೇಲಿನ ಅಭಿಮಾನದಿಂದ ನಮ್ಮನ್ನು ಆಯ್ಕೆ ಮಾಡುವಂತೆ ಹೇಳಿದ್ದಾರೆ. ವಿಪಕ್ಷದವರಿಗೆ ಸಹಜವಾಗಿ ನೋವಾಗುತ್ತದೆ. ಅದನ್ನು ಅನ್ಯತಾ ಭಾವಿಸಬೇಡಿ. ನಾನು 11 ಚುನಾವಣೆ ಕಂಡಿರುವೆ. 9 ಬಾರಿ ಗೆದ್ದಿರುವೆ. ರಾಜಕೀಯ ಮಾಡಲು ಸಾಕಷ್ಟು ವಿಷಯಗಳಿವೆ. ಸಮುದಾಯ ಕಾರ್ಯಕ್ರಮದಲ್ಲಿ ಮಾಡುವಷ್ಟು ಸಣ್ಣ ಮನುಷ್ಯ ನಾನಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts