ಯಲಬುರ್ಗಾ: ಸ್ವಾತಂತ್ರೃದ ಅಮೃತ ಮಹೋತ್ಸವ ನಿಮಿತ್ತ ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಆ.13 ರಿಂದ 15ರವರೆಗೆ ಪ್ರತಿಯೊಬ್ಬರ ಮನೆ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡಬೇಕು. ಸರ್ಕಾರಿ ನೌಕರರ ಕಡ್ಡಾಯವಾಗಿ ಪಾಲಿಸಬೇಕು ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂರು ದಿನ ಮನೆ ಮೇಲೆ ಧ್ವಜ ಹಾರಿಸಬೇಕು. ಯಾವುದೇ ಕಾರಣಕ್ಕೂ ಎಡವಟ್ಟಾಗದಂತೆ ಎಚ್ಚರಿಕೆವಹಿಸಬೇಕು ಎಂದರು.
ತಾಲೂಕಿನಲ್ಲಿ 24 ಕೆರೆಗಳಿದ್ದು, ಈಗಾಗಲೇ ಸರ್ವೇ ಮುಗಿದಿದೆ. ಮತ್ತೊಮ್ಮೆ ಸಮೀಕ್ಷೆದಾರರಿಗೆ ಮಾಹಿತಿ ನೀಡಿ ಹದ್ದುಬಸ್ತು ಮಾಡಿಕೊಳ್ಳಬೇಕು. ಅಮೃತ ಸರೋವರ ಯೋಜನೆಯಡಿ ಕೆರೆ ಅಭಿವೃದ್ಧಿ ಮಾಡುತ್ತಿದ್ದು, ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ. ಗ್ರಾಪಂ ಮಟ್ಟದಲ್ಲಿ ಸರ್ಕಾರಿ ಜಾಗದ ಸಮಸ್ಯೆ ಇದ್ದರೆ, ಪಿಡಿಒಗಳು ಬಗೆಹರಿಸಬೇಕು ಎಂದು ಸೂಚಿಸಿದರು.
ತಾಪಂ ಇಒ ಸಂತೋಷ ಬಿರಾದಾರ, ಸಹಾಯಕ ನಿರ್ದೇಶಕ ನಿಂಗನಗೌಡ, ಸಿಡಿಪಿಒ ಸಿಂಧು ಎಲಿಗಾರ, ಬಿಇಒ ಪದ್ಮನಾಭ ಕರ್ಣಂ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಕೆ.ಬಡಿಗೇರ್ ಇತರರಿದ್ದರು.