ಯಾದಗಿರಿ: ಸರ್ಕಾರಿ ಯೋಜನೆಯೊಂದರಲ್ಲಿ ಸಬ್ಸಿಡಿ ಹಣ ಬಿಡುಗಡೆಗೊಳಿಸಲು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಸಿಕ್ಕಿಬಿದ್ದ ಅಧಿಕಾರಿಯೊಬ್ಬರು ‘‘ನಿಮ್ಮ ಕಾಲಿಗೆ ಬೀಳುತ್ತೇನೆ ಸರ್, ನನ್ನನ್ನು ಬಿಟ್ಟುಬಿಡಿ’’ ಎಂದು ಗೋಳಾಡಿದ ಪ್ರಸಂಗ ಬುಧವಾರ ನಡೆದಿದೆ.
ಜಿಪಂ ಕಚೇರಿಯಲ್ಲಿನ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು ಅವರೇ ಎಸಿಬಿ ಅಧಿಕಾರಿಗಳ ಕಾಲು ಹಿಡಿದುಕೊಳ್ಳಲು ಮುಂದಾದವರು. ಕೌಳೂರು ಗ್ರಾಮದ ರೈತ ಶಿವರಡ್ಡಿ ಎಂಬುವರು ಹನಿ ನೀರಾವರಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಫಲಾನುಭವಿಗಳಿಗೆ 1 ಲಕ್ಷ ರೂ. ಸಬ್ಸಿಡಿ ಸರ್ಕಾರ ನೀಡುತ್ತದೆ. ಹೀಗಾಗಿ 5 ಸಾವಿರ ರೂ. ಲಂಚದ ಬೇಡಿಕೆಯನ್ನು ಅಧಿಕಾರಿ ಇಟ್ಟಿದ್ದರು.
ಇದನ್ನೂ ಓದಿ: ಕೃಷ್ಣಜನ್ಮಭೂಮಿ ಅರ್ಜಿ ತಿರಸ್ಕರಿಸಿದ ಲೋಕಲ್ ಕೋರ್ಟ್: ಮುಂದೇನು?
ಬುಧವಾರ ಕಚೇರಿಯಲ್ಲಿ ಶಿವರಡ್ಡಿ ಅವರಿಂದ ಹಣ ಪಡೆಯುವ ವೇಳೆ ಎಸಿಬಿ ಎಸ್ಪಿ ಮಹೇಶ ಮೇಘಣ್ಣವರ್ ನೇತೃತ್ವದ ತಂಡ ದಾಳಿ ನಡೆಸಿದೆ. ದಿಕ್ಕುತೋಚದಂತಾದ ಅಧಿಕಾರಿ ಮಲ್ಲಿಕಾರ್ಜುನ ಬಾಬು ‘‘ಕ್ಷಮಿಸಿ ಸರ್, ನನ್ನಿಂದ ತಪ್ಪಾಗಿದೆ. ಒಂದು ಸಾರಿ ಬಿಟ್ಟುಬಿಡಿ’’ ಎಂದು ಗೋಗರೆದಿದ್ದಾರೆ. ಆದರೆ ಅಧಿಕಾರಿಗಳು ಇದರಿಂದ ವಿಚಲಿತರಾಗದೆ, ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.