ಕಲ್ಕತ್ತ; ಪಶ್ಚಿಮ ಬಂಗಾಳದ 63 ಬಿಜೆಪಿ ಶಾಸಕರಿಗೆ ‘ಎಕ್ಸ್’ ಶ್ರೇಣಿಯ ಭದ್ರತೆ ನೀಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ತಾಂಡವವಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಗೃಹ ಇಲಾಖೆ ಹೇಳಿದೆ.
ಪ್ರತಿಯೊಬ್ಬ ಶಾಸಕರಿಗೆ ದಿನದ 24 ಗಂಟೆ ಮೂರರಿಂದ ಐವರು ಸಿಐಎಸ್ಎಫ್ ಯೋಧರು ಭದ್ರತೆ ನೀಡಲಿದ್ದಾರೆ. ಅಲ್ಲದೇ ಅವರ ಚಲನವಲನದ ಮೇಲೆ ಮುಖ್ಯ ಭದ್ರತಾ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ.
ನಂದಿಗ್ರಾಮದಲ್ಲಿ ಮಮತಾರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿ ಈಗ ವಿರೋಧ ಪಕ್ಷದ ನಾಯಕನಾಗಿರುವ ಸುವೇಂದು ಅಧಿಕಾರಿ ಅವರಿಗೆ ಈಗಾಗಲೇ Z ಶ್ರೇಣಿಯ ಭದ್ರತೆ ಇದೆ. ಇನ್ನುಳಿದ ಬಿಜೆಪಿ ಶಾಸಕರಿಗೆ ಹಾಗೂ ಕೆಲ ಬಿಜೆಪಿ ಮುಖಂಡರಿಗೆ ವೈ ಶ್ರೇಣಿಯ ಭದ್ರತೆ ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 9 ಜನ ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.