ಬೀದರ್: ಎರಡು ಅವಧಿಗೆ ಸಂಸದರಾದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಸಾಧನೆ ಶೂನ್ಯವಾಗಿದೆ. ಖೂಬಾ ಸಾಧನೆ ಕುರಿತು ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧ ಎಂದು ಮರಾಠ ಸಮುದಾಯದ ಹಿರಿಯ ಮುಖಂಡ, ಪಕ್ಷೇತರ ಅಭ್ಯರ್ಥಿ ಡಾ.ದಿನಕರರಾವ ಮೋರೆ ಸವಾಲೆಸೆದಿದ್ದಾರೆ.
ಭಾಷಣದಲ್ಲೇ ಸೋಲಾರ್ ಪಾಕರ್ಕ ಸ್ಥಾಪಿಸಿದ್ದು, ರಸಗೊಬ್ಬರ ಕಾರ್ಖಾನೆ ಸ್ಥಾಪನೆ ಆಗಿಲ್ಲ. ಪಕ್ಷದ ಮುಖಂಡರು ಸೇರಿ ಜನರೊಂದಿಗೂ ವಿನಯದಿಂದ ಮಾತನಾಡಲಿಲ್ಲ. ಖೂಬಾ ಅವರಿಗೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚಾಗಿದ್ದು, ಅಧಿಕಾರದ ಮದದಲ್ಲಿ ಮುಳುಗಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಖೂಬಾ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ. ಇನ್ನು ಈಶ್ವರ ಖಂಡ್ರೆ ಕುಟುಂಬ ರಾಜಕಾರಣದಲ್ಲಿ ಬಿಜಿಯಾಗಿದ್ದಾರೆ. ಹೀಗಾಗಿ ನನ್ನನ್ನು ಆಶೀರ್ವದಿಸಿದರೆ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ, ಐಟಿ ಹಬ್ ಸ್ಥಾಪನೆ, ಭಾಲ್ಕಿಯಲ್ಲಿ ಕ್ರೀಡಾಂಗಣ ಸೇರಿ ಬೀದರ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿರುವೆ. ಒಮ್ಮೆ ಚಾನ್ಸ್ ಕೊಡಿ ಎಂದು ಮನವಿ ಮಾಡಿದರು.
ಮರಾಠ ಸಮಾಜದ ಮುಖಂಡ ಪದ್ಮಾಕರ ಪಾಟೀಲ್ ಮಾತನಾಡಿ, ನಮ್ಮ ಸ್ಪರ್ಧೆ ನೇರವಾಗಿ ಕಾಂಗ್ರೆಸ್ ಜತೆಗಿದ್ದು, ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಖೂಬಾ ಯುವಕರು, ವಿದ್ಯಾರ್ಥಿಗಳಿಗಾಗಿ ಏನೂ ಮಾಡಿಲ್ಲ. ಕೇವಲ ಮೋದಿ ಹೆಸರಿನಲ್ಲಿ ಗೆದ್ದು ಲಿಂಗಾಯತ ಕೋಟಾದಡಿ ಮಂತ್ರಿ ಪದವಿ ಗಿಟ್ಟಿಸಿಕೊಂಡಿದ್ದಾರೆ ಎಂದು ಆಪಾದಿಸಿದರು.
ಜನಧ್ವನಿ ಸಂಘಟನೆ ಅಧ್ಯಕ್ಷ ಅಂಕುಶ ಗೋಖಲೆ, ಮುಖಂಡರಾದ ಜನಾರ್ಧನ್ ಬಿರಾದಾರ್, ಡಾ.ಬಾಲಾಜಿ ಸಾವಳೇಕರ್, ಶರಣಪ್ಪ ಕಡಗಂಚಿ, ರಾವುಸಾಹೇಬ್ ಬಿರಾದಾರ್, ಸೈಯದ್ ಆಷಾಕ್, ಭರತ ಇತರರಿದ್ದರು.