ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದಾಗ ದಿಗ್ಗಜ ಲೆಗ್ಸ್ಪಿನ್ನರ್ ಅನಿಲ್ ಕುಂಬ್ಳೆ ರೀತಿಯಲ್ಲಿ ತಂಡದಲ್ಲಿ ಸ್ಥಾನವನ್ನು ಖಚಿತಪಡಿಸಿದ ನಾಯಕ ಬೇರಾರೂ ಇಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಸ್ಪೋರ್ಟ್ಸ್ ತಕ್ ಎಂಬ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚುಟುಕಾಗಿ ಗೌತಿ ಎಂದು ಕರೆಯಲ್ಪಡುತ್ತಿದ್ದ ಗೌತಮ್ ಗಂಭೀರ್, ಅನಿಲ್ ಕುಂಬ್ಳೆ ಅವರ ಈ ಔದಾರ್ಯಕ್ಕಾಗಿ ಅವರಿಗಾಗಿ ಪ್ರಾಣವನ್ನು ಬೇಕಾದರೂ ಕೊಡಲು ಸಿದ್ಧನಿದ್ದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 2032ರ ಒಲಿಂಪಿಕ್ಸ್ಗೆ ಭಾರತ ಬಿಡ್; ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿಕೆ
ಅನಿಲ್ ಕುಂಬ್ಳೆ ಕೇವಲ 14 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇವರು ನಾಯಕರಾಗಿದ್ದ ಸಂದರ್ಭದಲ್ಲೇ ಆಸ್ಟ್ರೇಲಿಯಾದಲ್ಲಿ ಹರ್ಭಜನ್ ಸಿಂಗ್ ಮತ್ತು ಆಂಡ್ರ್ಯೂ ಸಿಮಂಡ್ಸ್ ನಡುವಿನ ಮಂಕಿಗೇಟ್ ವಿವಾದ ಸೃಷ್ಟಿಯಾಗಿತ್ತು. ಈ ಸಂದರ್ಭವನ್ನು ನಿರ್ವಹಿಸುವಲ್ಲಿ ಅನಿಲ್ ಕುಂಬ್ಳೆ ರಾಜತಾಂತ್ರಿಕ ನೈಪುಣ್ಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಅವರ ಈ ಗುಣಗಳನ್ನು ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಆರ್.ಪಿ. ಸಿಂಗ್ ಕೊಂಡಾಡಿದ್ದರು. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಕೂಡ ಅನಿಲ್ ಕುಂಬ್ಳೆ ಅವರ ನಾಯಕತ್ವದ ಗುಣವನ್ನು ಮೆಚ್ಚಿಕೊಂಡು ಹೊಗಳಿದ್ದಾರೆ.
ಇದನ್ನೂ ಓದಿ: ದೇಣಿಗೆಗಾಗಿ ಹರ್ಷಲ್ ಗಿಬ್ಸ್ ಬ್ಯಾಟ್ ಹರಾಜು; ಕೋವಿಡ್ 19 ವಿರುದ್ಧ ಹೋರಾಟಕ್ಕೆ ದೇಣಿಗೆ
2008ರ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ನಾನು ಮತ್ತು ವೀರೇಂದ್ರ ಸೆಹ್ವಾಗ್ ರಾತ್ರಿ ಭೋಜನ ಮಾಡುತ್ತಿದ್ದೆವು. 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನಾಲ್ಕೂ ಪಂದ್ಯಗಳಲ್ಲಿ ನೀವಿಬ್ಬರೂ ಆರಂಭಿಕರಾಗಿ ಕಣಕ್ಕಿಳಿಯುತ್ತೀರಿ. ನೀವು 8 ಇನಿಂಗ್ಸ್ಗಳಲ್ಲೂ ಶೂನ್ಯ ಸಾಧನೆ ಮಾಡಿದರೂ ತೊಂದರೆ ಇಲ್ಲ ಎಂದು ಹೇಳಿದರು. ಇದನ್ನು ಕೇಳಿಸಿಕೊಂಡ ನಂತರದಲ್ಲಿ ನಾನು ಯಾರಿಗೂ ಪ್ರಾಣವನ್ನು ಬೇಕಾದರೂ ಕೊಡಬೇಕೆಂದರೆ ಅದು ಅನಿಲ್ ಕುಂಬ್ಳೆ ಮಾತ್ರ ಎಂದು ತೀರ್ಮಾನಿಸಿದೆ ಎಂದು ಗೌತಿ ವಿವರಿಸಿದ್ದಾರೆ.
ಆ ಸರಣಿಯಲ್ಲಿ ಗೌತಮ್ ಗಂಭೀರ್ ದ್ವಿಶತಕ ಸಾಧನೆಯ ಜತೆಗೆ ಉತ್ತಮ ಪ್ರದರ್ಶನ ತೋರಿದರು. ತಮ್ಮ ಈ ಎಲ್ಲ ಸಾಧನೆಯ ಶ್ರೇಯ ಅನಿಲ್ ಕುಂಬ್ಳೆ ಅವರಿಗೆ ಸಲ್ಲತಕ್ಕದ್ದು ಎಂದು ಹೇಳಿದ್ದಾರೆ.
ಸೌರವ್ ಗಂಗೂಲಿ ಮತ್ತು ಎಂ.ಎಸ್. ಧೋನಿ ರೀತಿಯಲ್ಲಿ ದೀರ್ಘಾವಧಿವರೆಗೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸುವ ಅವಕಾಶ ಕುಂಬ್ಳೆಗೆ ದೊರೆತಿದ್ದರೆ, ಇನ್ನೂ ಹಲವು ದಾಖಲೆಗಳು ನಿರ್ಮಾಣವಾಗಿರುತ್ತಿದ್ದವು ಎಂದು ಅಭಿಪ್ರಾಯಪಟ್ಟಿದ್ದಾರೆ.