ಬೆಂಗಳೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸೆ.29ರಂದು ‘ಪ್ರವಾಸೋದ್ಯಮ ಹಾಗೂ ಹಸಿರು ಹೂಡಿಕೆ’ ಸಂದೇಶದಡಿಯಲ್ಲಿ ಆಚರಿಸುವ ಸಂಬಂಧ ಎಲ್ಲ ಜಿಲ್ಲೆಗಳಲ್ಲಿನ ಹೋಟೆಲ್, ರೆಸಾರ್ಟ್ ಮತ್ತು ಹೋಮ್ಸ್ಟೇಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ವಚ್ಚತೆ ಹಾಗೂ ನೈರ್ಮಲ್ಯ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಉಪಕ್ರಮವನ್ನು ಕೈಗೊಳ್ಳಲಾಗಿದೆ.
ಈ ಸಂಬಂಧ ಅಂದು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪ್ರಸ್ತುತಿಪಡಿಸಲು ಎಲ್ಲ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಸಾಮಾನ್ಯ ಸಲಹೆಗಳನ್ನು ಪಾಲಿಸುವಂತೆ ಪ್ರವಾಸೋದ್ಯಮ ಇಲಾಖೆ ಸೂಚನೆ ನೀಡಿದೆ.
ಈ ಬಾರಿಯ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಥೀಮ್ ಅನ್ನು ಪರಿಸರ ಸ್ನೇಹಿ ಅಂಶಗಳನ್ನು ಬ್ಯಾನರ್ನಲ್ಲಿ ಮುದ್ರಿಸಿ ಪ್ರದರ್ಶಿಸಬೇಕು. ಪ್ರವಾಸಿಗರಿಗೆ ಸಾಂಪ್ರದಾಯಕ ಖಾದ್ಯಗಳನ್ನು ಒದಗಿಸಬೇಕು. ಪ್ರವಾಸಿ ತಾಣಗಳ ಕುರಿತ ವಿಡಿಯೋಗಳನ್ನು ಎಲ್ಲ ಹೋಟೆಲ್ಗಳು ಹಾಗೂ ಕಚೇರಿಗಳಲ್ಲಿ ಪ್ರದರ್ಶಿಸಬೇಕು. ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವುದರ ಮೂಲಕ ಸಸಿಗಳನ್ನು ನೆಡುವಂತೆ ಸೂಚಿಸಲಾಗಿದೆ.
ರಾಜ್ಯದಾದ್ಯಂತ ಎಲ್ಲ ಹೋಟೆಲ್ಗಳು ಹಾಗೂ ರೆಸ್ಟೋರೆಂಟ್ಗಳಲ್ಲಿ ವಿದ್ಯುತ್ ದೀಪಾಲಂಕಾರವನ್ನು ಕೈಗೊಳ್ಳಬೇಕು. ಕೊಠಡಿಗಳ ದರಗಳಲ್ಲಿ ವಿಶೇಷ ರಿಯಾಯಿತಿಯನ್ನು ನೀಡಬೇಕು ಹಾಗೂ ಛಾಯಾಚಿತ್ರಗಳನ್ನೊಳಗೊಂಡ ಸೆಲ್ಫಿ ಪಾಯಿಂಟ್ಗಳನ್ನು ಅಳವಡಿಸಬೇಕು. ಹೋಟೆಲ್ಗಳು ಹಾಗೂ ರೆಸ್ಟೋರೆಂಟ್ಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಕೈಗೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.