ಏಳು ಸ್ವರವು ಸೇರಿ ಸಂಗೀತವಾಯಿತು… ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು… ಏಳುದಿನವು ಸೇರಿ ಒಂದು ವಾರವಾಯಿತು… ಏಳು ತಾರೆ ಸಪ್ತ ಋಷಿಯ ಚಿಹ್ನೆಯಾಯಿತು… ಅನ್ನೋ ರೀತಿಯಲ್ಲಿ ನಾನು ನಮ್ಮಮ್ಮನಿಗೆ ಏಳನೆಯ ಮಗುವಾಗಿ ಮಡಿಲು ತುಂಬಿದವಳು. ಕೊಪ್ಪ ತಾಲ್ಲೂಕಿನ ನಾರ್ವೆ ನಮ್ಮೂರು. ನಮ್ಮದು ತುಂಬು ಸಂಸಾರ. ಮನೆಯಲ್ಲಿ ಸದಾ ಯಾರಾದರೂ ನೆಂಟರಿಷ್ಟರು ಇದ್ದೇ ಇರುತ್ತಿದ್ದರು. ಖರ್ಚು ಜಾಸ್ತಿಯಿತ್ತು. ಶಾಲೆಯಲ್ಲಿ ಶಿಕ್ಷಕರಾಗಿದ್ದ ಅಪ್ಪ ಶಾಲೆಗೆ 5-6 ಕಿಮೀ ನಡೆದೇ ಹೋಗುತ್ತಿದ್ದರು. ಮನೆಗೆ ಬೇಕಾದ ಸೊಪ್ಪು ತರಕಾರಿಗಳನ್ನು ಮನೆ ಮುಂದಿನ ಕೈ ತೋಟದಲ್ಲಿ ತಾವೇ ಬೆಳೆಯುತ್ತಿದ್ದರು. ಅಪ್ಪ ತುಂಬಾ ಶ್ರಮಜೀವಿ. ಆದರೂ ಮಕ್ಕಳು ಬೆಳೆದಂತೆ ಖರ್ಚು ಮತ್ತಷ್ಟು ಜಾಸ್ತಿಯಾಗತೊಡಗಿತು.
ನನಗೆ ಎಸ್ಸೆಸೆಲ್ಸಿ ಮುಗಿಯುತ್ತಿದ್ದಂತೆ ಮುಂದೆ ಓದಬೇಕೆಂಬ ಹಂಬಲವಿತ್ತು ಆದರೆ ಹೆಣ್ಣುಮಕ್ಕಳು ಎಷ್ಟು ಓದಿದರೂ ಪಾತ್ರೆ ತೊಳಿಯೋದೇನು ತಪ್ಪುವುದಿಲ್ಲ ಅನ್ನೋ ಕಾಲ ಅದಾಗಿತ್ತು. ಹಾಗಾಗಿ ಓದನ್ನು ಅಲ್ಲಿಗೇ ಮೊಟಕುಗೊಳಿಸಲಾಯ್ತು. ಆದರೂ ನನ್ನ ಅಮ್ಮ ನನ್ನಲ್ಲಿರುವ ಚುರುಕುತನ ನೋಡಿ ಮನೆಯಲ್ಲಿಯೇ ಕುಳಿತು ಮಾಡುವ ಕೈಗಾರಿಕಾ ಕೆಲಸಗಳನ್ನು ಕಲಿಸಿದಳು. ಅಮ್ಮನ ಕೈಲೂ ದುಡ್ಡು ಇರ್ತಾ ಇರಲಿಲ್ಲ. ಸಾಸಿವೆ ಕಾಳು ಡಬ್ಬಿಯಲ್ಲಿ ಅಷ್ಟೋ ಇಷ್ಟೋ ಕೂಡಿಟ್ಟ ಹಣದಲ್ಲಿ ಕಲಿಸಿದಳು. ಅದು ನನಗೆ ಇಂದಿಗೂ ಉಪಯೋಗವಾಗುತ್ತಿದೆ. ಸಂಗೀತ ಕಲಿಯುವುದು, ಹತ್ತಿ ಎಳೆ ಮಾಡುವುದು, ಮಣಿಯಲ್ಲಿ ತೋರಣ ಹಾಕುವುದು, ಉಲ್ಲನ್ನಲ್ಲಿ ಸ್ವೆಟರ್ ಶಾಲು ಹೆಣೆಯುವುದು, ತರತರಹದ ರಂಗೋಲಿ ಹಾಕೋದು… ಇದನ್ನೆಲ್ಲಾ ನಮ್ಮ ಅಮ್ಮನೇ ಕಲಿಯಲು ಏರ್ಪಾಡು ಮಾಡಿದರು. ಈಗ ಅಮ್ಮನಿಗೆ 102 ವರ್ಷ. ಶತಮಾನೋತ್ಸವ ಮಾಡಬೇಕೆಂಬ ಹಂಬಲ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳಿಗಿದೆ. ಆದರೆ ಸದ್ಯದ ಕರೊನಾ ಸಂದರ್ಭದಲ್ಲಿ ಸಾಧ್ಯವಾಗುತ್ತಿಲ್ಲ.
| ರಾಧಾ ಕೆ. ಭಟ್ ಕುರುವಾ