ಎಚ್.ಡಿ.ಕೋಟೆ: ಬುಡಕಟ್ಟು ನಿವಾಸಿಗಳ ಆರೋಗ್ಯ ಸುಧಾರಣೆ ಹಾಗೂ ಬುಡಕಟ್ಟು ಮಕ್ಕಳನ್ನು ಶೈಕ್ಷಣಿಕವಾಗಿ ಉತ್ತೇಜಿಸುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬ ಅಭಿಲಾಷೆಯಿಂದ ನಮ್ಮ ಸಂಸ್ಥೆ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಶೈಲಜಾ ರಾಮಕೃಷ್ಣ ಚಾರಿಟಬಲ್ ಟ್ರಸ್ಟ್ನ ಮುಖ್ಯ ಕಾರ್ಯದರ್ಶಿ ಹರೀಶ್ಕುಮಾರ್ ತಿಳಿಸಿದರು.
ಶೈಲಜಾ ರಾಮಕೃಷ್ಣ ಚಾರಿಟಬಲ್ ಟ್ರಸ್ಟ್, ವಿಷ್ಣು ರಿಲೀಫ್ ಸೆಂಟರ್, ನಾವು ಫೌಂಡೇಷನ್, ತಾಲೂಕು ಆಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಜೆ.ಎಲ್.ಆರ್. ಕಬಿನಿ ಮತ್ತು ಡಿ.ಬಿ.ಗುಪ್ಪೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ತಾಲೂಕಿನ ಬಳ್ಳೆ ಹಾಡಿ ಹಾಗೂ ಗೋಳೂರು ಹಾಡಿಯ ಬುಡಕಟ್ಟು ನಿವಾಸಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಉಚಿತ ರಕ್ತಹೀನತೆ ಪತ್ತೆ, ಜಾಗೃತಿ ಶಿಬಿರ ಹಾಗೂ ಮಧುಮೇಹ ಪಾಠಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಬುಡಕಟ್ಟು ನಿವಾಸಿಗಳ ಆರೋಗ್ಯದ ಕಾಳಜಿಗಾಗಿ ಶಿಬಿರವನ್ನು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳುವ ಮೂಲಕ ಹಾಡಿ ನಿವಾಸಿಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಮೈಸೂರಿನ ವಿಷ್ಣು ರಿಲೀಫ್ ಸೆಂಟರ್ನ ಡಾ.ಭಾನುಕುಮಾರ್ ಮಾತನಾಡಿ, ಶಿಬಿರದಲ್ಲಿ 150ಕ್ಕೂ ಹೆಚ್ಚು ಬುಡಕಟ್ಟು ನಿವಾಸಿಗಳ ಆರೋಗ್ಯವನ್ನು ತಪಾಸಣೆ ಮಾಡಲಾಗಿದ್ದು, ನೂರಕ್ಕೂ ಹೆಚ್ಚು ಬುಡಕಟ್ಟು ನಿವಾಸಿಗಳಿಗೆ ರಕ್ತಹೀನತೆ ಸಮಸ್ಯೆ ಹಾಗೂ ಕೆಲವರಲ್ಲಿ ಸಕ್ಕರೆ ಕಾಯಿಲೆ ಬಂದಿದೆ. ಅಂತಹವರ ಆರೋಗ್ಯ ಸುಧಾರಣೆಗಾಗಿ ಔಷಧಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ಶಿಬಿರದಲ್ಲಿ ಪಾಲ್ಗೊಂಡಿದ್ದ ಬಳ್ಳೆ ಹಾಡಿ ಹಾಗೂ ಗೋಳೂರು ಹಾಡಿಯ ಬುಡಕಟ್ಟು ನಿವಾಸಿಗಳಿಗೆ ಬ್ಲಾಂಕೆಟ್ ಹಾಗೂ ಹಣ್ಣಿನ ಕಿಟ್ ಅನ್ನು ಉಚಿತವಾಗಿ ವಿಚಾರಿಸಲಾಯಿತು.
ಟ್ರಸ್ಟ್ ಅಧ್ಯಕ್ಷೆ ಶೈಲಜಾ ರಾಮಕೃಷ್ಣ, ಬೆಳ್ತೂರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೇಷಾದ್ರಿ, ಡಾ.ಮೋಹನ್, ಮೈಸೂರಿನ ನಾವು ಫೌಂಡೇಷನ್ ಮುಖ್ಯಸ್ಥ ನವೀನ್, ಸಂಸ್ಥೆಯ ಸದಸ್ಯರಾದ, ಡಾ.ಪೂರ್ಣಿಮಾ, ನಿರ್ಮಲಾ, ಶೇಖರ್, ರಾಜೇಶ್, ಶಿವುಪ್ರಸಾದ್, ಫೀಲ್ಡ್ ಆಫೀಸರ್ ಗೋವಿಂದರಾಜು, ಬಸವಣ್ಣ, ಮಂಜುಳಾ ಇತರರಿದ್ದರು.