ಬೆಟ್ಟದಪುರ: ಸಮೀಪದ ಸಂಗರಶೆಟ್ಟಹಳ್ಳಿ ಬಳಿ ಶುಕ್ರವಾರ ಸಂಜೆ ಗದ್ದೆಗೆ ಹೋಗುತ್ತಿದ್ದ ಇಬ್ಬರು ಮಹಿಳೆಯರನ್ನು ಅಪರಿಚಿತರು ಅಡ್ಡಗಟ್ಟಿ ಮಾಂಗಲ್ಯ ಸರ ಹಾಗೂ ಉಂಗುರಗಳನ್ನು ಕಿತ್ತು ಪರಾರಿಯಾಗಿದ್ದಾರೆ.
ಸಂಜೆ 6 ಗಂಟೆಯಲ್ಲಿ ಗದ್ದೆ ಕೊಯ್ಲು ಮಾಡುತ್ತಿದ್ದ ಕುಟುಂಬದವರಿಗೆ ಕಾಫಿ ಕೊಡಲು ಸಂಗರಶೆಟ್ಟಹಳ್ಳಿ ಗ್ರಾಮದ ಸ್ವಾತಿ, ರಮ್ಯಾ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ಕು ಜನ ಅಪರಿಚಿತರು ಮಹಿಳೆಯರನ್ನು ಅಡ್ಡಗಟ್ಟಿ ವಿಳಾಸ ಕೇಳುವ ನೆಪದಲ್ಲಿ ಸ್ವಾತಿ ಅವರ 30 ಗ್ರಾಂ ಮಾಂಗಲ್ಯ ಸರ ಹಾಗೂ ರಮ್ಯಾ ಅವರ ಎರಡು ಉಂಗುರವನ್ನು (9 ಗ್ರಾಂ) ಕಿತ್ತುಕೊಂಡಿದ್ದಾರೆ. ಇವರಿಬ್ಬರು ಕೂಡಲೇ ಕಿರುಚಿ ಪ್ರತಿರೋಧ ತೋರಿದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿ ಪರಾರಿಯಾಗಿದ್ದಾರೆ. ಡಿವೈಎಸ್ಪಿ ಗೋಪಾಲಕೃಷ್ಣ, ಸಿಪಿಐ ದೀಪಕ್, ಪಿಎಸ್ಐ ಪ್ರಕಾಶ್ಎಂ ಎತ್ತಿನಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.