ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮಕ್ಕೆ ಒಂದು ತಿಂಗಳಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ ಎಂದು ಇಲ್ಲಿನ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸುವ ಮೂಲಕ ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ನಾಯಕರ ಹೊಸ ಬಡಾವಣೆಗೆ ಒಂದು ತಿಂಗಳಿಂದ ಓವರ್ ಹೆಡ್ ಟ್ಯಾಂಕ್ನಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಇಲ್ಲಿಗೆ ಸಂಪರ್ಕ ಕಲ್ಪಿಸುವ ಕುಡಿಯುವ ನೀರಿನ ಪೈಪ್ ಒಡೆದುಹೋಗಿದ್ದು, ದುರಸ್ತಿಗೆಂದು ಹಳ್ಳ ತೆಗೆದು ಹಾಗೆ ಬಿಡಲಾಗಿದೆ. ಈ ನಡುವೆ ಗ್ರಾಮ ಪಂಚಾಯಿತಿಯೂ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದರು.
ನೀರಿಗಾಗಿ ಕೊಡ ಹಿಡಿದು ಕಿಲೋಮೀಟರ್ಗಟ್ಟಲೇ ತೆರಳಬೇಕಾದ ಅನಿವಾರ್ಯತೆ ಇದೆ. ಇನ್ನಾದರೂ ಸಂಬಂಧಪಟ್ಟವರು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಗ್ರಾಮಸ್ಥರಾದ ಲಕ್ಷ್ಮೀ, ಕಂದಹಳ್ಳಿ ದೊರೆ, ಮಣಿಯಮ್ಮ, ಮಹಾದೇವಮ್ಮ, ಶಾಂತಮ್ಮ, ಶಾರದಮ್ಮ, ಸರೋಜಮ್ಮ ಹಲವರು ಹಾಜರಿದ್ದರು.