ಚಿಕ್ಕಮಗಳೂರು: ಮಹಿಳೆಯರು ಸಂಘ ಸಂಸ್ಥೆಗಳ ಮೂಲಕ ಸಂಘಟಿತರಾಗಿ ಸಮಾಜ ಸೇವೆ ಮಾಡುತ್ತ ಇತರರಿಗೆ ಮಾದರಿಯಾಗಬೇಕು ಎಂದು ಅಖಿಲ ಭಾರತೀಯ ತೇರಾಪಂಥ್ ಮಹಿಳಾ ಮಂಡಲ್ ರಾಜ್ಯಾಧ್ಯಕ್ಷೆ ಜೈಪುರದ ಸರಿತಾಜೀ ಡಾಗಾ ತಿಳಿಸಿದರು.
ನಗರದ ರುಕ್ಮಿಣಿಯಮ್ಮ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಅಖಿಲ ಭಾರತೀಯ ತೇರಾಪಂಥ್ ಮಹಿಳಾ ಮಂಡಲ್ ಮತ್ತು ಚಿಕ್ಕಮಗಳೂರು ತೇರಾಪಂಥ್ ಮಹಿಳಾ ಮಂಡಳಿಯಿಂದ ನಿರ್ಮಿಸಿರುವ ಆಚಾರ್ಯ ಮಹಾಶ್ರೀಮಣ್ ಕನ್ಯಾಸುರಕ್ಷಾ ವೃತ್ತ ಮತ್ತು ಐದು ಬೆಂಚ್ಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ತೇರಾಪಂಥ್ ಮಹಿಳೆಯರು ರಾಜ್ಯಾದ್ಯಂತ ಮಹಿಳಾ ಸಂಘಗಳನ್ನು ಒಗ್ಗೂಡಿಸಿಕೊಂಡು, ಸಮುದಾಯದ ಅಭಿವೃದ್ಧಿ ಜತೆಗೆ ಸಮಾಜಕ್ಕೆ ಅಗತ್ಯವಿರುವ ಕೆಲಸಗಳನ್ನು ಮಾಡಿ ಮಾದರಿಯಾಗಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಜೈನ ಸಂಘಕ್ಕೆ ನಗರದ ಆಸ್ಪತ್ರೆ ಆವರಣದಲ್ಲಿ ಆಚಾರ್ಯ ಮಹಾಶ್ರೀಮಣ್ ಕನ್ಯಾಸುರಕ್ಷಾ ವೃತ್ತ ಮಾಡಲು ಸಂಪೂರ್ಣ ಸಹಕಾರ ನೀಡಲಾಗಿದೆ. ಈ ಮೂಲಕ ಪ್ರತಿಯೊಬ್ಬರೂ ಹೆಣ್ಣು ಮಕ್ಕಳನ್ನು ರಕ್ಷಿಸಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಬೇಕು ಎಂಬ ಧ್ಯೇಯವನ್ನು ತೇರಾಪಂಥ್ ಮಹಿಳಾ ಮಂಡಳಿ ಇಟ್ಟುಕೊಂಡು ವೃತ್ತವನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.
ಮಂಗಳಾ ಎಚ್.ಡಿ. ತಮ್ಮಯ್ಯ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವ ಮೂಲಕ ಪುರುಷರ ಸರಿಸಮಾನರಾಗಿ ಬೆಳೆದು ಸಮಾಜ ಸೇವಾ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಅಖಿಲ ಭಾರತೀಯ ತೇರಾಪಂಥ್ ಮಹಿಳಾ ಮಂಡಲದ ಕಾರ್ಯದರ್ಶಿ ನೀತೂಜೀ ಓಸ್ವಾಲ್, ಕಾರ್ಯಕಾರಿಣಿ ಸದಸ್ಯ ಸಂತೋಷ್ಜೀ ವೇದಾಮುದಾ, ಸಹಕಾರ್ಯದರ್ಶಿ ಶಶಿಕಲಾಜೀ, ಜಿಲ್ಲಾಸ್ಪತ್ರೆ ವೈದ್ಯ ಡಾ. ಚಂದ್ರಶೇಖರ್ ಸಾಲಿಮಠ್, ಜೈನ್ ತೇರಾಪಂಥ್ ಸಭಾಧ್ಯಕ್ಷ ತಾರಾಚಂದ್ ಜೈನ್, ನಗರಸಭೆ ಸದಸ್ಯ ವಿಫುಲ್ಕುಮಾರ್ ಜೈನ್, ತೇರಾಪಂಥ್ ಮಹಿಳಾ ಮಂಡಳಿ ಅಧ್ಯಕ್ಷೆ ಗುಣವತಿ ನಾಹರ್, ಕಾರ್ಯದರ್ಶಿ ನರಿತಾ ಗಾಧಿಯಾ, ಅಣುವ್ರತ್ ಸಮಿತಿ ಅಧ್ಯಕ್ಷೆ ಮಂಜುಬಾಯಿ ಬನ್ಸಾಲಿ ಉಪಸ್ಥಿತರಿದ್ದರು.