More

    ಒಬ್ಬಂಟಿ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ದರೋಡೆ


    ಬಂಟ್ವಾಳ: ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿ ದರೋಡೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಡೆಕಾನ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
    ಬರಿಮಾರು ಗ್ರಾಮದ ಕಡೆಕಾನ ನಿವಾಸಿ ರೋಹಿತ್ ಎಂಬುವರ ಪತ್ನಿ ಪವಿತ್ರ ಎಂಬಾಕೆಯನ್ನು ಕಂಬಕ್ಕೆ ಕಟ್ಟಿ ಹಾಕಿದ ದುಷ್ಕರ್ಮಿಗಳು ಚಿನ್ನ, ನಗದು ಹಾಗೂ ಅಡಕೆಯನ್ನು ಕದ್ದೊಯ್ದಿದ್ದಾರೆ.

    ರೋಹಿತ್ ಕುಮಾರ್ ಐಸ್ ಕ್ರೀಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಪತ್ನಿ ಪವಿತ್ರ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿರುತ್ತಿದ್ದರು. ಗುರುವಾರ ಮಕ್ಕಳಿಬ್ಬರು ಮೂಡುಬಿದಿರೆಗೆ ಜಾಂಬೂರಿ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದರೆ, ಗಂಡ ಕೆಲಸಕ್ಕೆ ಹೋದವರು ಇನ್ನೂ ಬಂದಿರಲಿಲ್ಲ. ಸಂಜೆ 6.30ರ ವೇಳೆಗೆ ಪವಿತ್ರ ಅವರು ಸ್ನಾನ ಮಾಡುತ್ತಿದ್ದ ವೇಳೆ ಮನೆಯ ಮಾಡು, ಕಿಟಕಿ ಗಾಜಿಗೆ ಕಲ್ಲು ಎಸೆದ ಶಬ್ಧವಾಗಿದೆ.

    ಸ್ನಾನ ಮಾಡಿ ಹೊರ ಬಂದು ನೋಡಿದಾಗ ಯಾರು ಕಾಣಿಸಲಿಲ್ಲ. ಮರಳಿ ಮನೆಯೊಳಗೆ ತೆರಳುತ್ತ್ತಿದ್ದಂತೆ ಇಬ್ಬರು ಮುಸುಕುದಾರಿಗಳು ಏಕಾಏಕಿ ಪವಿತ್ರ ಅವರನ್ನು ಎಳೆದೊಯ್ದು ಮನೆಯಂಗಳದಲ್ಲಿದ್ದ ಅಡಕೆ ಮರದ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಕಸಿದ ಕಳ್ಳರು ಮನೆಯೊಳಗೆ ನುಗ್ಗಿ ಗದು 4 ಸಾವಿರ ಹಾಗೂ ಅಂಗಳದಲ್ಲಿ ಗೋಣಿಯಲ್ಲಿದ್ದ ಅಡಕೆಯನ್ನು ಕೊಂಡುಹೋಗಿದ್ದಾರೆ.
    ರಾತ್ರಿ 7ರ ವೇಳೆಗೆ ಸಮೀಪದ ಮನೆಯವರು ಪವಿತ್ರಾಳನ್ನು ಕಟ್ಟಿಹಾಕಿದ್ದನ್ನು ನೋಡಿ ಸ್ಥಳಕ್ಕಾಗಮಿಸಿ ಕಟ್ಟುಬಿಚ್ಚಿದ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts