ಇಂದೋರ್: ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರು ತನ್ನ ಎಂಟು ವರ್ಷದ ಮಗಳು ಮತ್ತು 9 ಮತ್ತು 10 ವರ್ಷದ ಪುತ್ರರನ್ನು ಬೀದಿಗಳಲ್ಲಿ ಭಿಕ್ಷೆ ಬೇಡಲು ಬಿಟ್ಟು ಕೇವಲ 45 ದಿನಗಳಲ್ಲಿ 2.5 ಲಕ್ಷ ರೂಪಾಯಿ ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಮಹಿಳೆಯ ಕುಟುಂಬವು ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 150 ಜನರ ಭಾಗವಾಗಿದ್ದು, ರಾಜಸ್ಥಾನದಲ್ಲಿ ಜಮೀನು ಮತ್ತು ಎರಡು ಅಂತಸ್ತಿನ ಮನೆಯನ್ನು ಸಹ ಹೊಂದಿದ್ದಾರೆ ಎಂದು ಎನ್ಜಿಒ ಹೇಳಿಕೊಂಡಿದೆ.
ಮಹಿಳೆಯ ಹೆಸರು ಇಂದ್ರಾ ಭಾಯಿ. ಇತ್ತೀಚೆಗೆ ಇಂದೋರ್-ಉಜ್ಜಯಿನಿ ರಸ್ತೆಯ ಲುವ್-ಕುಶ್ ಜಂಕ್ಷನ್ ಬಳಿ ಭಿಕ್ಷೆ ಬೇಡುತ್ತಿದ್ದಳು. ಆಕೆಯ ಬಳಿ 19,200 ರೂಪಾಯಿ ನಗದು ಸಿಕ್ಕಿದೆ ಎಂದು ಪ್ರವೇಶ್ ಸಂಘಟನೆಯ ಅಧ್ಯಕ್ಷೆ ರೂಪಾಲಿ ಜೈನ್ ಹೇಳಿದ್ದಾರೆ. ಈ ಪ್ರವೇಶ್ ಸಂಘಟನೆ ಇಂದೋರ್ ನಗರವನ್ನು ಭಿಕ್ಷುಕ ಮುಕ್ತ ನಗರವನ್ನಾಗಿ ಮಾಡಲು ಪಣ ತೊಟ್ಟಿದೆ. ಪ್ರವೇಶ್ ತಂಡವನ್ನು ತಂಡವನ್ನು ನೋಡಿದ ಇಂದ್ರಾ ಭಾಯಿಯ ಇಬ್ಬರು ಪುತ್ರರು ಸ್ಥಳದಿಂದ ಓಡಿಹೋದರು, ಆದರೆ, ಬಾಲಕಿಯನ್ನು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಯಲ್ಲಿ ಇರಿಸಲಾಗಿದೆ.
ಸಂಘಟನೆಯ ಕಾರ್ಯಕರ್ತರು ಮಹಿಳೆ ಇಂದ್ರಾ ಭಾಯಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸಿ ಎರಡೂವರೆ ಲಕ್ಷ ರೂಪಾಯಿ ಸಂಪಾದಿಸಿದ್ದು, ಅದರಲ್ಲಿ ಪತಿಗೆ ಬೈಕ್ ಖರೀದಿಸಲು 1 ಲಕ್ಷ ನೀಡಿ ಉಳಿದ ಹಣವನ್ನು ರಾಜಸ್ಥಾನದ ಬ್ಯಾಂಕ್ಗೆ ಹಾಕಿರುವುದಾಗಿ ಇಂದ್ರಾ ಭಾಯಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸದ್ಯ ಇಂದ್ರಾ ಭಾಯಿ ಪೊಲೀಸ್ ಕಸ್ಟಡಿಯಲ್ಲಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಭಿಕ್ಷುಕರ ಮುಕ್ತ ರಾಜ್ಯವಾಗಿಸಲು ಇಂದೋರ್ ಸೇರಿದಂತೆ ಸುಮಾರು ಹತ್ತು ನಗರಗಳಲ್ಲಿ ಭಿಕ್ಷುಕ ನಿರ್ಮೂಲನಾ ಚಟುವಟಿಕೆ ಪ್ರಗತಿಯಲ್ಲಿವೆ. ಭಿಕ್ಷಾಟನೆಯಲ್ಲಿ ತೊಡಗಿದ್ದ ಹತ್ತು ಮಕ್ಕಳನ್ನು ಶಿಶುಪಾಲನಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಮಾಹಿತಿ ನೀಡಿದರು. ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ಸಹ ನೀಡಿದರು. (ಏಜೆನ್ಸೀಸ್)
ನಿನ್ನ ಹೆಂಡ್ತಿ ಅಂದ್ರೆ ನನಗಿಷ್ಟ ಎಂದ ಭಾರತೀಯನಿಗೆ ಪ್ಯಾಟ್ ಕಮಿನ್ಸ್ ಕೊಟ್ಟ ಉತ್ತರ ವೈರಲ್!
“ಕಾಟೇರ” ನಿರ್ಮಾಪಕ ರಾಕ್ಲೈನ್ ಒಡೆತನದ ಮಾಲ್ಗೆ ಬೀಗ ಜಡಿದ ಬಿಬಿಎಂಪಿ