ಹುಣಸೂರು: ನಗರದ ಹಳೇ ಸೇತುವೆ ಬಳಿ ಗುರುವಾರ ಮಧ್ಯರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಮಹಿಳೆ ಮೃತಪಟ್ಟಿದ್ದು, 12 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕೇರಳ ತಲಚೇರಿಯ ಶರೀನಾ (26) ಮೃತಪಟ್ಟಿದ್ದು, ಕರೀನಾ, ಶ್ರೀರಾಘು, ಸಿರಾಜ್, ಅಂಜನಾ, ಲೋಗಿನ್, ಫರ್ಹದ್, ಶ್ವೇತಾ, ಭಾವಿಷಾ, ಅಮೃತಾ, ಅಕ್ಷಯ್, ಸಂತೋಷ್, ಶೈನಿ, ಶಿವೋತ್, ಚಾಲಕ ಸುದಿನ್ ಹಾಗೂ ಕ್ಲೀನರ್ ಅನ್ಸಾಫ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೇರಳ ಮತ್ತು ಮೈಸೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲಡ ಟ್ರಾವಲ್ಸ್ಗೆ ಸೇರಿದ ಬಸ್ ಬೆಂಗಳೂರಿನಿಂದ ತಲಚೇರಿಗೆ ಹಳೇ ಸೇತುವೆ ಮೂಲಕ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬಂದ ಮತ್ತೊಂದು ಬಸ್ಗೆ ಡಿಕ್ಕಿ ತಪ್ಪಿಸಲು ಹೋದ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದ ತಾಲೂಕು ಕಚೇರಿಗೆ ತೆರಳುವ ರಸ್ತೆಯ ತಿರುವಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ತಕ್ಷಣ ಆಟೋ ಚಾಲಕರು ಬಸ್ ಗಾಜುಗಳನ್ನು ಒಡೆದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ನಂತರ ಬಸ್ ಅನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು. ಡಿವೈಎಸ್ಪಿ ಸುಂದರರಾಜ್, ವೃತ್ತ ನಿರೀಕ್ಷಕ ಪೂವಯ್ಯ, ಎಸ್ಐ ಮಹೇಶ್, ಎಎಸ್ಐ ಶೇಖರ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿ, ಇತರ ಪ್ರಯಾಣಿಕರನ್ನು ಬೇರೆ ಬಸ್ನಲ್ಲಿ ಕೇರಳಕ್ಕೆ ಕಳುಹಿಸಿದರು.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.