ಭಟ್ಕಳ: ರಂಜಾನ್ ಮಾರ್ಕೆಟ್ನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯುವಾಗ ಉದ್ರಿಕ್ತರ ಗುಂಪೊಅದು ಪೊಲೀಸ್ ಜಿಪ್ ಅಡ್ಡಗಟ್ಟಿ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ದಾಳಿಯಿಂದ ಪೊಲೀಸ್ ಜೀಪ್ನ ಗ್ಲಾಸ್ ಒಡೆದಿದೆ.
ಗುರುವಾರ ತಡ ರಾತ್ರಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹದ್ಲೂರು ನಿವಾಸಿ ಚಂದ್ರು ಸೋಮಯ್ಯ ಗೊಂಡ, ಸರ್ಪನಕಟ್ಟೆ ರವೀಂದ್ರ ಶಂಕರ ನಾಯ್ಕ, ಗೊರಟೆ ವೆಂಕಟೇಶ ನಾಯ್ಕ, ಸುಲ್ತಾನ್ ಸ್ಟ್ರೀಟ್ನ ಮಹ್ಮದ್ ಮೀರಾ, ಮೊಹ್ಮದ್ ಇಮ್ರಾನ್ ಶೇಖ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಒಟ್ಟು 9 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ವಿವರ: ಭಟ್ಕಳ ರಂಜಾನ್ ಮಾರ್ಕೆಟ್ನಲ್ಲಿ ಮಹಿಳೆಯನ್ನು ಸ್ಪರ್ಶಿದ್ದಾರೆ ಎಂದು ಭಟ್ಕಳದ ಮುಖ್ಯ ರಸ್ತೆಯ ಮುಸ್ಬಾ ಕ್ರಾಸ್ ಸಮೀಪ ಉಭಯಕೋಮಿನ ಯುವಕರು ಗಲಾಟೆ ಮಾಡಿಕೊಳ್ಳುತ್ತಿದ್ದರು. ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಕೇಳಲು ಹೋದಾಗ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈಯ್ದಡುತ್ತಾ ರಂಪಾಟ ಆರಂಭಿಸಿದ್ದರು.
ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ತಪ್ಪಿಸಲು ಚಂದ್ರ ಸೋಮಯ್ಯ ಗೊಂಡ ಮತ್ತು ಮಹ್ಮದ್ ಮೀರಾ ಅವರನ್ನು ವಶಕ್ಕೆ ಪಡೆದು ಸ್ಥಳಕ್ಕೆ ಬಂದ ಪೊಲೀಸ ಜೀಪಿನಲ್ಲಿ ಹಾಕಿದಾಗ ಅಲ್ಲಿದ್ದ ಇನ್ನುಳಿದ ಆರೋಪಿಗಳು ಜೀಪ್ ಅಡ್ಡಗಟ್ಟಿ ಕಲ್ಲಿನಿಂದ ಗ್ಲಾಸ್ ಒಡೆದುಹಾಕಿದ್ದಾರೆ.
ಪೊಲೀಸ್ ಜೀಪ್ ಮೇಲೆ ದಾಳಿಗೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಮುಂಜಾನೆ ವಶಕ್ಕೆ ಪಡೆದುಕೊಂಡಿದ್ದು ಇನ್ನು ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಭಟ್ಕಳಕ್ಕೆ ಎಡಿಷನಲ್ ಎಸ್.ಪಿ. ಸಿಟಿ ಜಯಕುಮಾರ ಭೇಟಿ ನೀಡಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ರಂಜಾನ್ ಮಾರ್ಕೆಟ್ ನಡೆಸಲು ಯಾವುದೇ ಅನುಮತಿ ನೀಡಿಲ್ಲ. ಗುರುವಾರ ನಡೆದ ಘಟನೆ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು ರಾತ್ರಿ ತನಕ ರಂಜಾನ್ ಮಾರ್ಕೆಟ್ ನಡೆಸ ಬೇಕೋ ಬೇಡ ಎಂದು ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನಿಸುತ್ತೇವೆ.
-ಮಮತಾ ದೇವಿ ಜಿ.ಎಸ್
ಉಪವಿಭಾಗಾಧಿಕಾರಿ, ಭಟ್ಕಳ