ಕಂಪ್ಲಿ: ಹೊರಗಿನ ಆಡಂಬರದ ಜೀವನಕ್ಕಿಂತ ಹೃದಯ ಶ್ರೀಮಂತಿಕೆ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಜೈನಧರ್ಮದ ಗುರು ಪ್ರಿಯ ಶ್ರೇಷ್ಠಾಂಜನಶ್ರೀಜಿ ಹೇಳಿದರು.
ಸಿಂಧನೂರಿನಿಂದ ಪಾದಯಾತ್ರೆ ಮೂಲಕ ಇಲ್ಲಿನ ಶ್ರೀಮುನಿ ಸುರತ್ ಜೈನ್ ಶ್ವೇತಾಂಬರ ಮಂದಿರದ ಧರ್ಮಛತ್ರಕ್ಕೆ ಆಗಮಿಸಿ ಶುಕ್ರವಾರ ಉಪನ್ಯಾಸ ನೀಡಿದರು. ದೇವರ ಬಳಿ ಹಣ, ಆಸ್ತಿ, ಅಂತಸ್ತು, ಅಧಿಕಾರ ಸೇರಿ ಭೌತಿಕ ಸಿರಿವಂತಿಕೆಗಾಗಿ ಪ್ರಾರ್ಥಿಸುವ ಬದಲಿಗೆ ಆತ್ಮೋದ್ಧಾರಕ್ಕಾಗಿ ಮಾರ್ಗ ತೋರಿಸುವಂತೆ ಬೇಡಬೇಕು. ಆತ್ಮಶಾಂತಿಯಿಂದ ಮಾತ್ರ ಮೋಕ್ಷ ಸಾಧ್ಯ ಎಂದರು.
ಜೈನ ಧರ್ಮದ ಗುರೂಜಿ ಪ್ರಿಯ ಹಿತಾಂಜನ ಶ್ರೀಜಿ ಮಾತನಾಡಿ, ಏಕಾಗ್ರತೆಯಿಂದ ದೇವರನ್ನು ಪ್ರಾರ್ಥಿಸಿದಲ್ಲಿ ಮನಸು ನಿಷ್ಕಲ್ಮಷವಾಗುತ್ತದೆ. ಪರೋಪಕಾರಕ್ಕಾಗಿ ಜೀವನ ಸಾಗಿಸಬೇಕು ಎಂದು ಹೇಳಿದರು. ಬಳಿಕ ಹಂಪಿಗೆ ಪ್ರಯಾಣ ಬೆಳೆಸಿದರು. ಇಲ್ಲಿನ ಜೈನಸಮಾಜದ ಮಾಜಿ ಉಪಾಧ್ಯಕ್ಷ ಶಾಂತಿಲಾಲ್ ಬಾಲಾರ್ ಸಹೋದರಿ ಪ್ರಿಯ ಹಿತಾಂಜನ ಶ್ರೀಜಿ ಕಳೆದ 5ವರ್ಷಗಳ ಹಿಂದೆ ಜೈನದೀಕ್ಷೆ ಪಡೆದ ನಂತರ ಮೊದಲ ಬಾರಿಗೆ ಕಂಪ್ಲಿಗೆ ಆಗಮಿಸಿದ್ದರು.
ಪ್ರಮುಖರಾದ ಪಾರಸ್ಮಲ್ ಹುಂಡಿಯಾ, ಶಾಂತಿಲಾಲ್ ಸಿಂಘ್ವಿ, ಗೌತಮ್ ರಾಂಕಾ, ಫತೇಕುಮಾರ್ ಭಾಪ್ಣಾ, ಗೌತಮ್ ಬಾಗ್ರೇಚಾ, ಹೀರಾಚಾಂದ್ ರಾಂಕಾ ಇತರರಿದ್ದರು.