ಹೊಸಕೋಟೆ/ಸೂಲಿಬೆಲೆ: ಮದ್ಯದಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪಿಯೊಬ್ಬ ಶುಕ್ರವಾರ ಪೊಲೀಸ್ ಸುಪರ್ದಿಯಲ್ಲಿರುವಾಗಲೇ ಮೃತಪಟ್ಟಿರುವುದು ಅನುಮಾನಗಳಿಗೆ ಎಡೆಮಾಡಿದೆ.
ತಿರುಮಲಶೆಟ್ಟಿಹಳ್ಳಿ ಠಾಣಾ ವ್ಯಾಪ್ತಿಯ ನಡವತ್ತಿ ಗ್ರಾಮದ ಮುನಿಕುಳ್ಳಪ್ಪ (54) ಮೃತ. ಹೊಸಕೋಟೆ ಎಂವಿಜೆ ಆಸ್ಪತ್ರೆಯಲ್ಲಿ ಆರೋಪಿ ಕೊನೆಯುಸಿರೆಳೆದಿದ್ದಾನೆ.
ಆರೋಪಿ ಆತ್ಮಹತ್ಯೆ?:
ಅಕ್ರಮ ಮದ್ಯ ಮಾರಾಟದ ಆರೋಪದ ಮೇಲೆ ಆರೋಪಿಯನ್ನು ನಡವತ್ತಿ ಗ್ರಾಮದಲ್ಲಿ ಬಂಧಿಸಿ ಮದ್ಯ ಜಪ್ತಿ ಮಾಡುವ ವೇಳೆ ಆರೋಪಿ ಮದ್ಯದ ಬಾಟಲಿಗಳನ್ನು ಪಾಳು ಬಾವಿಯಲ್ಲಿ ಇಟ್ಟಿರುವುದಾಗಿ ಹೇಳಿ ಪೊಲೀಸರನ್ನು ಕರೆದೊಯ್ದಿದ್ದ. ಈ ವೇಳೆ ಪೊಲೀಸರ ಗಮನ ಬೇರೆಡೆ ಸೆಳೆದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಎಂವಿಜೆ ಅಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಲಕಾರಿಯಾಗದೆ ಆರೋಪಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಜರು ಜಾಗದಿಂದ 10 ಕೇಸ್ ಮದ್ಯ ವಶಕ್ಕೆ ಪಡೆದಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೃತನ ಪತ್ನಿ ಆರೋಪ:
ಕೆ.ಮಲ್ಲಸಂದ್ರದಲ್ಲಿ ಬಾರ್ನ ಬೀಗ ಮುರಿದು ಮದ್ಯ ಕಳವು ಮಾಡಿದ ಆರೋಪದಲ್ಲಿ ಮುನಿಕುಳ್ಳಪ್ಪನನ್ನು 3 ದಿನಗಳ ಹಿಂದೆ ತಿರಮಲಶೆಟ್ಟಿಹಳ್ಳಿ ಪೊಲೀಸರು ಕರೆದೊಯ್ದಿದ್ದರು. ಶುಕ್ರವಾರ ಮಧ್ಯಾಹ್ನ ಮಾಲು ಜಪ್ತಿಗಾಗಿ ನಡವತ್ತಿ ಗ್ರಾಮಕ್ಕೆ ಕರೆತಂದಿದ್ದರು. ಈ ವೇಳೆ ಪೊಲೀಸರು ಮುನಿಕುಳ್ಳಪ್ಪನ ಎದೆಗೆ ಒದ್ದ ಪರಿಣಾಮ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಮೃತನ ಪತ್ನಿ ಧನಲಕ್ಷ್ಮೀ ಆರೋಪಿಸಿದ್ದಾರೆ.
ಈ ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡದಿದ್ದರೆ, ಮೃತ ದೇಹವನ್ನು ಠಾಣೆ ಮುಂದಿಟ್ಟು ಉಗ್ರ ಹೋರಾಟ ಮಾಡುತ್ತೇವೆ ಎಂದು ಜಿಪಂ ಸದಸ್ಯ ವೈಎಸ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಎಎಸ್ಪಿ ಸುಜಿಜ್ ಭೇಟಿ:
ಎಂವಿಜೆ ಆಸ್ಪತ್ರೆ ಮುಂದೆ ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಅಪರ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ಮಾಹಿತಿ ಪಡೆದು ತನಿಖೆ ನಡೆಸುವುದಾಗಿ ತಿಳಿಸಿದರು.
ಲಾಕ್ಡೌನ್ ವೇಳೆ ಆರೋಪಿಗಳ ಪ್ರಯಾಣಕ್ಕೆ ಸಹಾಯ ಮಾಡಿದ ಹಿರಿಯ ಐಪಿಎಸ್ ಅಧಿಕಾರಿಗೆ ಶಿಕ್ಷೆ!