ಶಿವಮೊಗ್ಗ: ಹಳೇ ಮೈಸೂರು ಭಾಗದಲ್ಲಿ ಈಗಿನಿಂದಲೇ ಒತ್ತು ಕೊಟ್ಟು ಕೆಲಸ ಮಾಡಿದ್ದೆ ಆದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇತಿಹಾಸ ನಿರ್ಮಾಣ ಆಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಹಿಂದೆಂದೂ ಇಲ್ಲದ ಸುವರ್ಣಾವಕಾಶ ಪಕ್ಷಕ್ಕಿದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ನಾಯಕರಿಗೂ ಅರಿವಿದೆ. ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವ ಕಾರಣ ಜನರ ಮಧ್ಯೆ ಹೋಗಿ ಕೆಲಸ ಮಾಡಬೇಕಿದೆ. ಇದರಿಂದ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬಹುದು ಎಂದರು.
ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂಬ ಅಭಿಲಾಷೆ ಇದೆ. ನಮ್ಮದು ರಾಷ್ಟ್ರೀಯ ಪಕ್ಷ. ಹಾಗಾಗಿ ಯಾರು, ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷವೇ ನಿರ್ಧಾರ ಮಾಡುತ್ತದೆ. ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಉತ್ತರಾಧಿಕಾರಿ ನಾನಲ್ಲ. ಪಕ್ಷ ಯಾವುದೇ ಕ್ಷೇತ್ರ ನೀಡಿದರೂ ಸ್ಪರ್ಧೆ ಮಾಡುವುದಷ್ಟೇ ನನ್ನ ಕೆಲಸ ಎಂದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ಆಗಲಿದೆ. ಅದನ್ನು ಸಿಎಂ ಬಸವರಾಜ ಬೊಮ್ಮಾಯಿ ನಿರ್ಧಾರ ಮಾಡುತ್ತಾರೆ. ರಾಜ್ಯ ಉಪಾಧ್ಯಕ್ಷನಾಗಿದ್ದೇನೆ. ವಿಜಯೇಂದ್ರನಿಗೆ ಯಾವ ಸ್ಥಾನಮಾನ ನೀಡಬೇಕು, ಹೇಗೆ ಪಕ್ಷಕ್ಕಾಗಿ ದುಡಿಸಿಕೊಳ್ಳಬೇಕು ಎಂಬುದನ್ನು ವರಿಷ್ಠರಿಗೆ ಬಿಟ್ಟ ವಿಚಾರ. ನಾನಾಗಲಿ ಅಥವಾ ನನ್ನ ತಂದೆ (ಯಡಿಯೂರಪ್ಪ)ಅವರಾಗಲಿ ನನಗೆ ಸಚಿವ ಸ್ಥಾನ ನೀಡುವಂತೆ ಯಾರ ಮೇಲೂ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಯತ್ನಾಳ್ರದ್ದು ಗಂಭೀರ ಆರೋಪ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬ ಪಕ್ಷದ ಹಿರಿಯ ಶಾಸಕ. ಸಿಎಂ ಪದವಿಗೆ 2,500 ಕೋಟಿ ರೂ. ಕೇಳಿದ್ದರು ಎಂಬುದು ಗಂಭೀರ ಆರೋಪ. ಇದನ್ನು ಕೇಂದ್ರ ನಾಯಕರು, ರಾಜ್ಯಾಧ್ಯಕ್ಷರು ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಗಮನಿಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಹಿರಿಯ ಶಾಸಕರಾಗಿ ಪಕ್ಷಕ್ಕೆ ಮುಜುಗರ ಆಗುವಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂಬುದು ನನ್ನ ಮನವಿಯಷ್ಟೇ ಎಂದು ವಿಜಯೇಂದ್ರ ಹೇಳಿದರು.
ಡಿಕೆಶಿಗೆ ಅಂಜುವ ಮಗನಲ್ಲ, ಹಣ ಕೊಟ್ಟರೆ ಸಿಎಂ ಮಾಡ್ತೀನಿ ಎಂಬ ಹೇಳಿಕೆ ಕೊಟ್ಟೇ ಇಲ್ಲ ಅಂದ್ರು ಯತ್ನಾಳ್!