ಫಾರುಖಾಬಾದ್: ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ 23 ಮಕ್ಕಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ವ್ಯಕ್ತಿ ಸಾವಿನ ಬೆನ್ನಲ್ಲೇ ಆತನ ಪತ್ನಿ ಸ್ಥಳೀಯರು ನಡೆಸಿದ ಕಲ್ಲು ತೂರಾಟ ಮತ್ತು ಹಲ್ಲೆಯಿಂದಾಗಿ ಮೃತಪಟ್ಟಿರುವುದಾಗಿ ಶುಕ್ರವಾರ ವರದಿಯಾಗಿದೆ.
ಫಾರುಖಾಬಾದ್ನ ಗ್ರಾಮವೊಂದರಲ್ಲಿ ಗುರುವಾರ ರಾತ್ರಿ ಪೊಲೀಸರು ಮತ್ತು ಆರೋಪಿ ಸುಭಾಷ್ ಬಾಥಮ್ ನಡುವೆ ಸುಮಾರು 10ಗಂಟೆ ಅವಧಿವರೆಗೂ ನಡೆದ ದಾಳಿ-ಪ್ರತಿದಾಳಿಯಲ್ಲಿ ಬಾಥಮ್, ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಆತನ ಹತ್ಯೆಯ ಬಳಿಕ ಒತ್ತೆಯಾಳಾಗಿರಿಸಿಕೊಂಡಿದ್ದ 23 ಮಕ್ಕಳನ್ನು ಪೊಲೀಸರು ಸುರಕ್ಷಿತವಾಗಿ ಮರಳಿ ಕರೆತಂದಿದ್ದಾರೆ.
ಇದೇ ವೇಳೆ ಬಾಥಮ್ ಪತ್ನಿಯನ್ನು ಎಳೆದುಕೊಂಡ ಸ್ಥಳೀಯರು ಇಟ್ಟಿಗೆ ಮತ್ತು ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಸಾವಿಗೀಡಾಗಿದ್ದಾಳೆ.
23 ಮಕ್ಕಳು ಸುರಕ್ಷಿತವಾಗಿದ್ದು, ಆರೋಪಿ ಹತ್ಯೆಗೂ ಮುನ್ನ ಒಂದು ವರ್ಷದ ಮಗುವನ್ನು ಗುರುವಾರ ತಡರಾತ್ರಿ ಬಿಡುಗಡೆ ಮಾಡಲಾಗಿತ್ತು. ಇದು ಬಾಥಮ್ ಅಥವ ಆತನ ಪತ್ನಿಯ ಯೋಜನೆಯೇ ಎಂದು ಇನ್ನು ತಿಳಿದುಬಂದಿಲ್ಲ. ಆದರೂ ಈ ಘಟನೆ ಉತ್ತರ ಪ್ರದೇಶವನ್ನು ಆತಂಕಕ್ಕೆ ದೂಡಿದೆ. ಅಂದಹಾಗೆ ಆರೋಪಿ ಬಾಥಮ್ 2001ರಲ್ಲಿ ಕೊಲೆ ಪ್ರಕರಣ ಆರೋಪಿಯಾಗಿದ್ದ. ಅವನೊಬ್ಬ ಉದ್ರಿಕ್ತ ಮತ್ತು ಹಿಂಸಾತ್ಮಕ ವ್ಯಕ್ತಿಯೆಂದು ಹೇಳಲಾಗಿದೆ.
ಘಟನೆ ಹಿನ್ನೆಲೆ ಏನು?
ನಿನ್ನೆ ರಾತ್ರಿ ತನ್ನ ಒಂದು ವರ್ಷದ ಮಗುವಿನ ಹುಟ್ಟುಹಬ್ಬವಿದೆ ಎಂದು ಹೇಳಿ ಕೆಲವು ಮಕ್ಕಳನ್ನು ತನ್ನ ಮನೆಗೆ ಬಾಥಮ್ ಆಹ್ವಾನಿಸಿದ್ದ. ಕರೆಗೆ ಓಗೊಟ್ಟು ಮಕ್ಕಳು ಮನೆಯೊಳಗೆ ಬಂದಾಗ ಎಲ್ಲರನ್ನು ಬಂಧಿಸಿ, ಬಂದೂಕಿನ ಜೀವ ಭಯದಲ್ಲಿರಿಸಿದ್ದ. ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಮಕ್ಕಳು ಇನ್ನು ಮನೆಗೆ ಬರದಿದ್ದನ್ನು ನೋಡಿ ಪಾಲಕರು ಬಾಥಮ್ ಮನೆಯ ಬಾಗಿಲನ್ನು ಬಡಿದಾಗ ತೆರೆಯದಿರುವುದನ್ನು ನೋಡಿ ಏನು ತೊಂದರೆ ಇದೆ ಎಂಬುದನ್ನು ಅರಿತರು. ಅದಕ್ಕೆ ಪುಷ್ಠಿ ನೀಡುವಂತೆ ಬಾಥಮ್ ಗುಂಡಿನ ದಾಳಿ ನಡೆಸಿದ್ದ. ಇದರಿಂದ ಭಯಗೊಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಂದಾಗ ಅವರ ಮೇಲೆಯೂ ಗುಂಡಿನ ದಾಳಿ ನಡೆಸಿ, ಕಚ್ಛಾ ಬಾಂಬ್ ಎಸೆದಿದ್ದ.
ಉಗ್ರ ನಿಗ್ರಹ ಪಡೆಯ ಕಮಾಂಡೋಸ್ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದ್ದವು. ಈ ವೇಳೆ ಸಂಧಾನಕ್ಕೆ ಮುಂದಾಗಿ ಸುಮಾರು ಒಂದು ಗಂಟೆ ಕಾಲ ಫೋನ್ ಮೂಲಕ ಮಾತುಕತೆ ನಡೆಸಿದರೂ ಫಲಪ್ರದವಾಗಲಿಲ್ಲ. ಬದಲಾಗಿ ಗುಂಡಿನ ದಾಳಿ ನಡೆಸಿದ ಆತ ಪಾನಮತ್ತನಾಗಿದ್ದ ಎಂದು ಊಹಿಸಲಾಗಿತ್ತು. ಬಳಿಕ ಮಧ್ಯರಾತ್ರಿ ದಾಳಿ ನಡೆಸುವ ಯೋಜನೆ ಹಾಕಿಕೊಂಡ ಪೊಲೀಸರು, ಆತನ ಮೇಲೆ ನಿರಂತರ ದಾಳಿ ನಡೆಸಿದಾಗ ಆತ ಗುಂಡಿನ ದಾಳಿಗೆ ಹತ್ಯೆಯಾಗಿದ್ದ. ಬಳಿಕ ಆತನ ಪತ್ನಿಯನ್ನು ಸ್ಥಳೀಯರು ಹಿಡಿದು ಥಳಿಸಿ ಹತ್ಯೆಗೈದಿದ್ದಾರೆ. (ಏಜೆನ್ಸೀಸ್)