ಹಾಸನ: ರಾತ್ರೋರಾತ್ರಿ ಪತ್ನಿಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಮತ್ತೊಂದು ಜೀವ ಬಲಿಯಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ರಾಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ 25 ವರ್ಷದ ಪೂಜಾಳನ್ನು ಈಕೆಯ ಗಂಡ ಗಂಗಾಧರ್(28) ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ತನ್ನ ಮಗನಿಂದಲೇ ಸೊಸೆ ಕೊಲೆಯಾಗಿರುವ ಸುದ್ದಿ ಕೇಳುತ್ತಿದ್ದಂತೆ ಆಘಾತಗೊಂಡ ಗಂಗಾಧರ್ ತಾಯಿ ಜಯಮ್ಮ, ವಿಷ ಸೇವಿಸಿದ್ದರು.
ಮಗನ ದುಷ್ಕೃತ್ಯಕ್ಕೆ ನೊಂದ ಜಯಮ್ಮ(52), ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ಜಯಮ್ಮರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದರು.
ಗಂಗಾಧರ್ಗೆ ಪತ್ನಿ ಪೂಜಾಳ ಮೇಲೆ ಅನುಮಾನ ಇತ್ತು. ಆಕೆ ಯಾರ ಜತೆ ಮಾತನಾಡಿರೂ ಅನುಮಾನಿಸಿ ಹಿಂಸೆ ನೀಡುತ್ತಿದ್ದ. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
2014ರಲ್ಲಿ ಪೂಜಾಳನ್ನು ಗಂಗಾಧರ್ ಮದುವೆಯಾಗಿದ್ದ. ಈ ದಂಪತಿಗೆ 5 ವರ್ಷದ ಮಗು ಇದೆ. ಅಪ್ಪನ ಅನುಮಾನಕ್ಕೆ ಅಮ್ಮನ ಪ್ರಾಣ ಹೋಯ್ತು, ಅಪ್ಪ ಜೈಲು ಪಾಲು. ಇತ್ತ ಅಪ್ಪನ ಕೃತ್ಯಕ್ಕೆ ನೊಂದ ಅಜ್ಜಿಯೂ ಸಾವಿನ ಕದ ತಟ್ಟಿದಳು. ಏನೂ ಅರಿಯದ ಪುಟ್ಟ ಬಾಲಕನೀಗ ಅನಾಥವಾಗಿದ್ದಾನೆ.
ರಾತ್ರೋರಾತ್ರಿ ಮನೆಯಲ್ಲೇ ಪತ್ನಿಯನ್ನು ಕೊಚ್ಚಿ ಹಾಕಿದ ಭೂಪ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ