ತೆಲಸಂಗ: ಗ್ರಾಮದ ಹೊರವಲಯದ ಚೆಕ್ಪೋಸ್ಟ್ ಬಳಿ ವ್ಯಕ್ತಿಯೊಬ್ಬ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ನಡು ರಸ್ತೆಯಲ್ಲೇ ಬಿಟ್ಟುಹೋದ ಘಟನೆ ಸೋಮವಾರ ಸಂಜೆ ನಡೆದಿದೆ.
ಮಕ್ಕಳೊಂದಿಗೆ ಅಳುತ್ತ ಕುಳಿತಿದ್ದ ಮಹಿಳೆಯನ್ನು ರಸ್ತೆಯ ಪಕ್ಕ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರು ಗಮನಿಸಿ ಚೆಕ್ಪೋಸ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ತಿಳಿಸಿದ್ದಾರೆ. ನನ್ನ ಹೆಸರು ಅನಿತಾ ರಾಜು ಸಾವಳಗಿ. ನನ್ನ ಪತಿ ನನಗೆ ಮತ್ತು ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾನೆ.
ನಮ್ಮ ಊರಿಗೆ ತಲುಪಿಸುವುದಾಗಿ ತಿಳಿಸಿ ಈಗ ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದಳು. ನಾನು ನನ್ನ ತವರು ಮನೆಗೆ ಹೋಗುತ್ತೇನೆ, ದಯವಿಟ್ಟು ನನ್ನನ್ನು ವಿಜಯಪುರ ಜಿಲ್ಲೆಯ ತಾಳಿಕೋಟೆಗೆ ತಲುಪಿಸಿ ಎಂದು ವಿನಂತಿಸಿಕೊಂಡಳು.
ಅಧಿಕಾರಿಗಳ ಸ್ಪಂದನೆ: ಪೊಲೀಸ್ ಸಿಬ್ಬಂದಿ ಪತಿ ವಿರುದ್ಧ ದೂರು ನೀಡುವಂತೆ ಸಲಹೆ ನೀಡಿದರು. ಆದರೆ, ಮಹಿಳೆ ಪತಿ ವಿರುದ್ಧ ದೂರು ನೀಡಲು ನಿರಾಕರಿಸಿದ್ದಾಳೆ. ನಾನು ಗಂಡನ ಮನೆಯ ಬದಲು ತವರು ಮನೆಗೆ ಹೋಗುವುದಾಗಿ ತಿಳಿಸಿದಳು.
ಆಗ ಅದೇ ಮಾರ್ಗವಾಗಿ ಹೋಗುತ್ತಿದ್ದ ಕಾರ್ ತಡೆದ ಪೊಲೀಸರು ಸ್ವಂತ ಹಣದಿಂದ ಬಾಡಿಗೆ ನೀಡಿ ಚಾಲಕನ ಸಂಪೂರ್ಣ ಮಾಹಿತಿ ಪಡೆದು ಮಹಿಳೆಯನ್ನು ಮನೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.