ಮುಂಬೈ: ಐದು ವರ್ಷಗಳ ಹಿಂದೆ ಸತತ ಎರಡು ವರ್ಷಗಳ ಕಾಲ ಬಹಳ ಸದ್ದು ಮಾಡಿದ್ದ ರೈ ದ ಗ್ರೇಟೆಸ್ಟ್ ಗ್ಯಾಂಗ್ಸ್ಟರ್ ಎವರ್ ಎಂಬ ಸಿನಿಮಾದ ಫಸ್ಟ್ ಲುಕ್ 2016ರ ಮೇ 1ರಂದು ಅನಾವರಣಗೊಂಡಿತ್ತು. ಅದಾದ ನಂತರ ಈ ಸಿನಿಮಾ ಸುದ್ದಿಯಾಗಿದ್ದು ಬಹುಶಃ ಅದೇ ವರ್ಷ ಜುಲೈ ತಿಂಗಳಲ್ಲಿ ಮಧ್ಯಭಾಗದಲ್ಲಿ! ಬಳಿಕ ಈ ಸಿನಿಮಾ ಸದ್ದು ಅಡಗುವುದಕ್ಕೆ ಬಚ್ಕನಾ ಹೇಳಿದ ಕಥೆ ಕಾರಣವಾಯಿತಾ?
ಈ ಸಿನಿಮಾವನ್ನು ಕೈಗೆತ್ತಿಕೊಂಡದ್ದಕ್ಕಾಗಿ ಯೂಸುಫ್ ಬಚ್ಕನಾ ಎಂಬಾತ ರಾಮ್ ಗೋಪಾಲ್ ವರ್ಮಾಗೆ ಲೀಗಲ್ ನೋಟಿಸ್ ಕಳುಹಿಸಿದ್ದ! ರೈ ಸಿನಿಮಾದಲ್ಲಿ ಬಚ್ಕನಾ ಪಾತ್ರವನ್ನು ಹೇಗೆ ತೋರಿಸಲಾಗುತ್ತಿದೆ ಮತ್ತು ಅದರ ಕಥೆಯ ವಿವರನ್ನು ತನಗೆ ಹೇಳಿಲ್ಲ ಎಂಬುದು ಆತನ ತಗಾದೆಯಾಗಿತ್ತು. ಭೂಗತ ಜಗತ್ತಿನ ಮತ್ತೊಬ್ಬ ಡಾನ್ ಛೋಟಾ ರಾಜನ್ ನ ಸಹಚರ ಈ ಬಚ್ಕನಾ. ಈತನ ಇನ್ನೊಂದು ಹೆಸರು ಸುಲೇಮಾನ್ ಕಾದ್ರಿ. ಈತನ ಲಾಯರ್ಗಳಾದ ನಜ್ನೀನ್ ಖಟ್ರಿ ಮತ್ತು ರಯೀಸ್ ಖಾನ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದು, ಸಮಾಧಾನಕರ ಪ್ರತಿಕ್ರಿಯೆ ಸಿಗದೇ ಇದ್ದರೆ ಸಿವಿಲ್ ಮತ್ತು ಕ್ರಿಮಿನಲ್ ದಾವೆ ಹೂಡುವುದಾಗಿ ಎಚ್ಚರಿಸಿದ್ದರು.
ಇದನ್ನೂ ಓದಿ: ನನಗೆ ಕ್ಯಾನ್ಸರ್ ಇದೆ.. ಸಾವಿನ ಹತ್ತಿರದಲ್ಲೇ ಇದ್ದೇನೆ…
ಬಚ್ಕನಾ ಹೇಳುವ ಪ್ರಕಾರ, ಕರ್ನಾಟಕ ಪೊಲೀಸರು ರೈ ಅವರನ್ನು ಬಂಧಿಸಿದರು. ವರ್ಮಾಗೆ ಬಚ್ಕನಾ ಬಗ್ಗೆ ಗೊತ್ತಿಲ್ಲ ಮತ್ತು ಎಂದೂ ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡಿಲ್ಲ. ಮುತ್ತಪ್ಪ ರೈ ಅವರನ್ನು ಹೀರೋ ರೀತಿಯಲ್ಲಿ ಬಿಂಬಿಸಲಿರುವ ಸಿನಿಮಾವಾದ್ದರಿಂದ ಸಹಜವಾಗಿಯೇ ಬಚ್ಕನಾ ಪಾತ್ರವನ್ನು ವಿಲನ್ ಆಗಿ ಬಿಂಬಿಸಬಹುದು ಎಂಬ ಆತಂಕ ಇತ್ತು. ಹಾಗಾಗಿ ನೋಟಿಸ್ ಕಳುಹಿಸಿದೆ ಎಂಬ ವಿವರಣೆ ನೀಡಿದ್ದನ್ನು ಇಂಡಿಯ ಟುಡೇ ಅಂದು ಪ್ರಕಟಿಸಿತ್ತು.
ಯಾರು ಈ ಬಚ್ಕನಾ: ಬಿಲ್ಡರ್ ರಾಜಾರಾಮ್ ಮನ್ಜಾವ್ಕರ್ ಮೇಲೆ ಮೂರು ಸುತ್ತು ಗುಂಡು ಹಾರಿಸಿ 2013ರಲ್ಲಿ ಹತ್ಯೆಗೈದ ಪ್ರಕರಣದಲ್ಲಿ ಬಚ್ಕನಾ ಆರೋಪಿ. ಮುಂಬೈ ಪೊಲೀಸರು ಈತ ವಿರುದ್ಧ ಬಿಲ್ಡರ್ ಬಳಿ ಒತ್ತೆಹಣಕ್ಕೆ ಒತ್ತಾಯಿಸಿದ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಈತ ಬಂಧಿತನಾಗಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲ್ಪಟ್ಟಿದ್ದ. ಅಲ್ಲಿಂದ ಬೆಂಗಳೂರು ಜೈಲಿಗೆ ಸ್ಥಳಾಂತರಿಸಿ ಬಳಿಕ ಮುಂಬೈ ಪೊಲೀಸರ ಕಸ್ಟಡಿಗೆ ಒಳಪಟ್ಟಿದ್ದ. ಅನೇಕ ಅಪರಾಧ ಪ್ರಕರಣಗಳ ಆರೋಪಿಯಾಗಿ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದ. ಈತನಿಗೂ ಮುತ್ತಪ್ಪ ರೈಗೂ ಆಗಿಬರುತ್ತಿರಲಿಲ್ಲ.