ನವದೆಹಲಿ: ಕರೊನಾ ವೈರಸ್ ನಿಯಂತ್ರಣದ ಕ್ರಮವಾಗಿ ದೆಹಲಿ ಸರ್ಕಾರ ಗುಂಪುಗೂಡುವುದನ್ನು ನಿರ್ಬಂಧಿಸಿ ಸೆಕ್ಷನ್ 144 ಜಾರಿ ಮಾಡಿದ್ದರೂ ಅದನ್ನು ಉಲ್ಲಂಘನೆ ಮಾಡಿ ದೆಹಲಿ ನಿಜಾಮುದ್ದೀನ್ ಮರ್ಖಜ್ನಲ್ಲಿ ತಬ್ಲಿಘಿ ಜಮಾತ್ ಧಾರ್ಮಿಕ ಸಭೆ ನಡೆಸಿದ್ದು, ಅದರಲ್ಲಿ 3000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ನಂತರ ಅದೊಂದು ಕರೊನಾ ವೈರಸ್ ಹಾಟ್ಸ್ಫಾಟ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಭಾರತದಲ್ಲಿ ಕರೊನಾ ವೈರಸ್ ಮೂರು ಸಾವಿರದ ಗಡಿ ದಾಟಿದೆ. ಅದರಲ್ಲಿ ಶೇ.30ರಷ್ಟು ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದವರ ಪಾಲೇ ಇದೆ.
ಪೊಲೀಸರು ಈಗಾಗಲೇ ತಬ್ಲಿಘಿ ಜಮಾತ್ನ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಖಾಂಡಲ್ವಿ ಸೇರಿ ಒಟ್ಟು ಆರು ಮಂದಿಯ ವಿರುದ್ಧ ಸಾಂಕ್ರಾಮಿಕ ಕಾಯಿಲೆ ಕಾಯ್ದೆ 1897ರ ಅಡಿಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಾರೆ. ಆದರೆ ಮೌಲಾನಾ ಸಾದ್ ಪತ್ತೆಯಿಲ್ಲ. ಮಾ.28ರಿಂದಲೂ ತಲೆ ಮರೆಸಿಕೊಂಡಿದ್ದಾನೆ. ಈ ಮಧ್ಯೆ ಆಡಿಯೋವೊಂದನ್ನು ಬಿಡುಗಡೆ ಮಾಡಿರುವ ಆತ, ತನ್ನ ಅನುಯಾಯಿಗಳಿಗೆ ಸಂದೇಶವನ್ನೂ ನೀಡಿದ್ದ. ಕರೊನಾ ಸೋಂಕಿಗೆ ಸಂಬಂಧಪಟ್ಟಂತೆ ವೈದ್ಯರ ಸಲಹೆಗಳನ್ನು ಪಾಲಿಸಿ, ನಾನೂ ಸೆಲ್ಫ್ ಕ್ವಾರಂಟೈನ್ನಲ್ಲಿ ಇದ್ದೇನೆ ಎಂದು ಹೇಳಿದ್ದ. ಆದರೆ ಮೌಲಾನಾ ಸಾದ್ನ ಸುಳಿವು ಮಾತ್ರ ಸಿಗುತ್ತಿಲ್ಲ.
ಆದರೆ ಮೌಲಾನಾ ಮೊಹಮ್ಮದ್ ಸಾದ್ ನಿಜಕ್ಕೂ ಕ್ವಾರಂಟೈನ್ನಲ್ಲಿ ಇದ್ದಾನಾ? ಅಥವಾ ಬಂಧನದಿಂದ ತಪ್ಪಿಸಿಕೊಳ್ಳಲು ನಾಟಕ ಆಡುತ್ತಿದ್ದಾನಾ ಎಂಬ ಅನುಮಾನವೂ ಕಾಡುತ್ತಿದೆ. ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡ ಬಹುತೇಕರಿಗೆ ಕರೊನಾ ವೈರಸ್ ತಗುಲಿದೆ. ಹೀಗಿರುವಾಗ ಮೌಲಾನಾ ಸಾದ್ಗೂ ಸೋಂಕು ತಗುಲದೆ ಇರುತ್ತದೆಯಾ ಎಂಬರ್ಥದಲ್ಲೇ ಹಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಪೊಲೀಸರೂ ಇದೇ ಶಂಕೆ ವ್ಯಕ್ತಪಡಿಸಿದ್ದಾರೆ.
ಸದ್ಯ ದೆಹಲಿ ಪೊಲೀಸರೂ ಕೂಡ ಮೌಲಾನಾ ಸಾದ್ ಬಂಧನಕ್ಕೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ. ತಾನು 14ದಿನಗಳ ಕ್ವಾರೆಂಟೈನ್ನಲ್ಲಿ ಇದ್ದುದಾಗಿ ಸಾದ್ ಹೇಳಿಕೊಂಡಿದ್ದರಿಂದ ಈ ಅವಧಿಯಲ್ಲಿ ಬಂಧನ ಸಾಧ್ಯವಿಲ್ಲ. ಸದ್ಯಕ್ಕೆ ನಿಜಾಮುದ್ದೀನ್ ಮಸೀದಿಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಇನ್ನಿತರರ ಪತ್ತೆಕಾರ್ಯವೇ ಮೊದಲ ಆದ್ಯತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮೌಲಾನಾ ಸಾದ್ ತಮ್ಮ ಮನೆಯಲ್ಲೂ ಇಲ್ಲ. ಈಗಾಗಲೇ ಪೊಲೀಸ್ ಅಧಿಕಾರಿಗಳ ತಂಡವೊಂದು ಅವರ ಮನೆಗೂ ಭೇಟಿಕೊಟ್ಟಿತ್ತು. ಆದರೆ ಆತನ ಸುಳಿವು ಸಿಕ್ಕಿಲ್ಲ. ಎಲ್ಲಿದ್ದಾನೆ ಎಂಬ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ಮಧ್ಯೆ ಮೌಲಾನಾ ಪರ ವಕೀಲರು ಮತ್ತೊಂದು ವಿಷಯ ಹೇಳಿದ್ದಾರೆ. ಸಾದ್ ಸದ್ಯ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ದೆಹಲಿ ಪೊಲೀಸರ ನೋಟಿಸ್ಗೆ ಉತ್ತರಿಸುತ್ತಾರೆ ಎಂದಿದ್ದಾರೆ. (ಏಜೆನ್ಸೀಸ್)