ಬೆಂಗಳೂರು : “ಕೃಷ್ಣರಾಜ ಸಾಗರ ಅಣೆಕಟ್ಟೆ ಕುರಿತು ನಾನು ವ್ಯಕ್ತಪಡಿಸಿದ ಕಾಳಜಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಕ್ಷಣ ಪ್ರತಿಕ್ರಿಯಿಸಿದರು. ಆದರೆ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಕ್ರಮದ ಬಗ್ಗೆ ಮೌನ ವಹಿಸಿದ್ದೇಕೆ ?” ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಏನೆಲ್ಲ ಹಗರಣಗಳು ನಡೆಯುತ್ತಿವೆ. ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವುದು ಜಿಲ್ಲೆಯ ಜನತೆಗೆ ಗೊತ್ತಿದೆ. ಹಾಲು ಒಕ್ಕೂಟದ ಅವ್ಯವಹಾರವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದ್ದು, ವರದಿ ಸಲ್ಲಿಸಿದ ನಂತರ ನಿಜಾಂಶ ಹೊರಬೀಳಲಿದೆ ಎಂದರು.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಮನೆಯ ಒಂದು ಭಾಗವನ್ನು ಕೆಡವಲು ಬಿಎಂಸಿ ಸಿದ್ಧತೆ …
ಮೈಸುಗರ್ ಪುನರಾರಂಭವಾಗಲಿ : ಯಾವುದೇ ರೂಪದಲ್ಲಾಗಲಿ ಮೈಸೂರು ಸಕ್ಕರೆ ಕಾರ್ಖಾನೆ ಪುನರಾರಂಭವಾಗಬೇಕು ಎನ್ನುವುದು ನನ್ನ ಒತ್ತಾಯ. ಅದು, ಖಾಸಗಿಯೋ, ಸರ್ಕಾರಿಯೋ ಅಥವಾ ಜಂಟಿ ಸಹಭಾಗಿತ್ವವೋ… ಅನ್ನೋದು ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು. ಈ ವಿಷಯದಲ್ಲಿ ಹೀಗೆಯೇ ಮಾಡಿ ಎಂದು ಹೇಳುವಷ್ಟು ಪವರ್ ಫುಲ್ ವ್ಯಕ್ತಿ ನಾನಲ್ಲ ಎಂದರು. ಈ ವಿಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆ ಅವರ ಸಂಸ್ಕಾರ ವ್ಯಕ್ತಿತ್ವವನ್ನು ತೋರಿಸುತ್ತದೆ. ಮಹಿಳೆ ಎಂದು ಕ್ಲೇಮ್ ಮಾಡುವುದಿಲ್ಲ, ಇಂತಹ ಹೇಳಿಕೆಗಳಿಗೆಲ್ಲ ಐ ಡೋಂಟ್ ಕೇರ್ ಎಂದರು.
ಅಕ್ರಮಕ್ಕೆ ಸಾಕ್ಷ್ಯ : ಕೆಆರ್ ಎಸ್ ಅಣೆಕಟ್ಟೆ ಹತ್ತಿರವೇ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಸಾಕ್ಷ್ಯಗಳಿವೆ. ಇದು, ಅಣೆಕಟ್ಟೆ ಸುರಕ್ಷತೆಗೂ ಅಪಾಯಕಾರಿಯಾಗಿದ್ದು, ತಕ್ಷಣ ಸರ್ಕಾರ ಕ್ರಮ ವಹಿಸಬೇಕು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರೊಂದಿಗೆ ಖುದ್ದು ತಪಾಸಣೆ ಮಾಡಲಾಗಿದ್ದು, ಅಕ್ರಮ ದೃಢಪಟ್ಟ ಕಾರಣಕ್ಕೆ 100 ಕೋಟಿ ರೂ. ದಂಡವನ್ನು ಇಲಾಖೆ ವಸೂಲಿ ಮಾಡಿದೆ. ಕೆಆರ್ ಎಸ್ ಅಣೆಕಟ್ಟೆ ಬಿರುಕು ಸಾಧ್ಯತೆ ಬಗ್ಗೆ ನಾನು ನೀಡಿದ ಹೇಳಿಕೆ ವಿರೋಧಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸುಮಲತಾ ಅಂಬರೀಶ್ ಚಾಟಿ ಬೀಸಿದರು.