ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದಲ್ಲಿ ಜೈಲಲ್ಲಿ ಇರುವ ಆರೋಪಿ ಫಯಾಜ್ನ ಮೋಬೈಲ್ನಲ್ಲಿನ ಫೋಟೊಗಳನ್ನು ಹರಿಬಿಟ್ಟವರು ಯಾರು ? ಎಂದು ಪ್ರಶ್ನಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಈ ಕೆಲಸವನ್ನು ರಾಜ್ಯ ಸರ್ಕಾರವೇ ಮಾಡಿದೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿರಂಜನ ಹಿರೇಮಠ ಕುಟುಂಬದ ಬೇಡಿಕೆಯಂತೆ ಸರ್ಕಾರ ತನಿಖೆ ನಡೆಸಬೇಕು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.
ಹಿಂದು ನೆಲೆಗಟ್ಟಿನ, ಹಿಂದು ಸಮಾಜ ಸಂಘಟನೆ ಗಟ್ಟಿಯಾಗಿರುವ ಹುಬ್ಬಳ್ಳಿ ನೆಲದಲ್ಲೇ ಪರಿಸ್ಥಿತಿ ಹೀಗಾಗಿರುವಾಗ, ರಾಜ್ಯದ ಬೇರೆಡೆ ಸ್ಥಿತಿ ಏನಾಗಿರಬೇಡ ಎಂದು ಸಚಿವ ಜೋಶಿ ಆತಂಕ ವ್ಯಕ್ತಪಡಿಸಿದರು.
ತುಷ್ಟೀಕರಣ ರಾಜಕೀಯ ಮಾಡುವವರನ್ನು ಮೊದಲು ಅಧಿಕಾರದಿಂದ ಕಿತ್ತು ಹಾಕಬೇಕು. ಇಲ್ಲದಿದ್ದರೆ ನಮ್ಮ ಮನೆಗಳಲ್ಲೂ ನಾವು ಹಿಂದು ಧರ್ಮ ಸಂಸ್ಕೃತಿ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.