ನವದೆಹಲಿ: ವಿಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಚರ್ಚಿಸಲು ನಿಮಗೆ ಯಾವಾಗ ಧೈರ್ಯ ಬರುತ್ತದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸದನದಲ್ಲಿ ಪ್ರಶ್ನಿಸಿದ್ದಾರೆ.
ಮಣಿಪುರದಲ್ಲಿನ ಜನಾಂಗೀಯ ಘರ್ಷಣೆ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ವಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಅವರ ಈ ಪ್ರತಿಕ್ರಿಯೆ ಬಂದಿದೆ.
ಸಂಸತ್ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ನ ಆಮೀ ಯಾಗ್ನಿಕ್ ಮಣಿಪುರದಲ್ಲಿನ ಘರ್ಷಣೆ ಕುರಿತು ಮಹಿಳಾ ಸಚಿವೆಯರು ಯಾಕೆ ತಮ್ಮ ಧ್ವನಿಯನ್ನು ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: VIDEO| ಮಹಿಳೆಗೆ ಕಿರುಕುಳ ನೀಡಿದ ಬಿಎಸ್ಎಫ್ ಯೋಧ; ಸೇವೆಯಿಂದ ಅಮಾನತು
ಇದಕ್ಕೆ ಉತ್ತರಿಸಿದ ಸಚಿವೆ ಸ್ಮೃತಿ ಇರಾನಿ ಮಹಿಳಾ ಸಚಿವರು ಹಾಗೂ ರಾಜಕಾರಣಿಗಳು ಮಣಿಪುರ, ಛತ್ತೀಸ್ಗಢ, ಬಿಹಾರ, ರಾಜಸ್ಥಾನದ ಬಗ್ಗೆಯೂ ಸಹ ಮಾತನಾಡುತ್ತಾರೆ. ಮಣಿಪುರ ಹೊರತುಪಡಿಸಿ ಈ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಚರ್ಚಿಸಲು ನಿಮಗೆ ಯಾವಾಗ ಧೈರ್ಯ ಬರುತ್ತದೆ ಎಂದು ವಿಪಕ್ಷ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿನ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಮಾತನಾಡಲು ನಿಮಗೆ ಯಾವಾಗ ಧೈರ್ಯ ಬರುತ್ತದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದಾರೆ.