ಶಿವಮೊಗ್ಗ: ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ ಸ್ಥಳ ಮಹಜರಿಗೆ ಕರೆದೊಯ್ದಿದ್ದಾಗ ಪೊಲೀಸರ ಮೇಲೆ ಆಯುಧದಿಂದ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಮಂಜುನಾಥ ಅಲಿಯಾಸ್ ಒಲಂಗಾ ಮಂಜ(ನೇಪಾಳಿ ಮಂಜ)ನ ಕಾಲಿಗೆ ಗುಂಡೇಟು ಬಿದ್ದಿದೆ.
ಗುರುವಾರ ಬೆಳಗ್ಗೆ ಆರೋಪಿ ಒಲಿಂಗಾ ಮಂಜನನ್ನು ಜಯನಗರ ಠಾಣೆ ಇನ್ಸ್ಪೆಕ್ಟರ್ ಸಿದ್ದೇಗೌಡ ಮತ್ತು ಸಿಬ್ಬಂದಿ ಸ್ಥಳ ಮಹಜರಿಗೆ ಕರೆದೊಯ್ದಿದ್ದರು. ಈ ವೇಳೆ ಆಯುಧಗಳನ್ನು ತೆಗೆದುಕೊಳ್ಳುತ್ತಲೇ ಸಿಬ್ಬಂದಿ ರವಿ ಮತ್ತು ಆಕಾಶ್ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಶರಣಾಗುವಂತೆ ಸೂಚಿಸಿದರೂ ಕೇಳಲಿಲ್ಲ. ಹಾಗಾಗಿ ಇನ್ಸ್ಪೆಕ್ಟರ್ ಸಿದ್ದೇಗೌಡ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದು ಬಲಗಾಲಿನ ಪಾದಕ್ಕೆ ಗುಂಡು ತಗುಲಿದೆ.
ಮೂರು ದಿನಗಳ ಹಿಂದೆ ಫ್ರೀಡಂಪಾರ್ಕ್ನಲ್ಲಿ ಶಶಿಕುಮಾರ್ ಎಂಬಾತನ ಮೇಲೆ ಚಾಕುವಿನಿಂದ ಇರಿದು ಕೊಲೆ ಯತ್ನಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಜಯನಗರ ಠಾಣೆ ಪೊಲೀಸರು ಒಲಂಗಾ ಮಂಜ ಸೇರಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ಗುರುವಾರ ಬೆಳಗ್ಗೆ ಆಯುಧಗಳ ಮಹಜರ್ಗೆಂದು ಆರೋಪಿಯನ್ನು ಕರೆದೊಯ್ದಿದ್ದಾಗ ಸಿಬ್ಬಂದಿ ರವಿ ಮೇಲೆ ಡ್ರಾೃಗರ್ನಿಂದ ದಾಳಿ ನಡೆಸಿದ್ದ. ಎಚ್ಚರಿಕೆ ನೀಡಿದರೂ ಕೇಳದ ಮಂಜನ ಕಾಲಿಗೆ ಇನ್ಸ್ಪೆಕ್ಟರ್ ಸಿದ್ದೇಗೌಡ ಗುಂಡು ಹಾರಿಸಿದ್ದರು. ಗಾಯಗೊಂಡ ಪೊಲೀಸ್ ಸಿಬ್ಬಂದಿ ರವಿ ಮತ್ತು ಮಂಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.