ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ನಿವೃತ್ತಿಯ ಬಗ್ಗೆ ಕಳೆದ ಕೆಲ ಸಮಯಗಳಿಂದ ಸುದ್ದಿ ಹರಿದಾಡುತ್ತಲೇ ಇದ್ದರೂ, ಕಳೆದ ಶನಿವಾರ ಅವರು ದಿಢೀರ್ ವಿದಾಯ ಪ್ರಕಟಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಆದರೆ ಇದೇ ಧೋನಿ 2006ರಲ್ಲೇ ನಿವೃತ್ತಿಗೆ ಮುಂದಾಗಿದ್ದರು ಎಂಬ ವಿಷಯ ನಿಮಗೆ ಗೊತ್ತೇ? ಧೋನಿ ಅವರ ಮಾಜಿ ಸಹ-ಆಟಗಾರ ವಿವಿಎಸ್ ಲಕ್ಷ್ಮಣ್ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಹಾಗಾದರೆ ಧೋನಿ ಅವರು ಆಗಲೇ ಅಂಥದ್ದೊಂದು ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಕ್ಕೆ ಕಾರಣವೇನೆಂದು ಗೊತ್ತೇ? ಅದುವೇ ಟೆಸ್ಟ್ ಕ್ರಿಕೆಟ್ ಶತಕ!
ಹೌದು, 2006 ಧೋನಿ ಆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಂಬೆಗಾಲಿಡುತ್ತಿದ್ದ ವರ್ಷವಾಗಿತ್ತು. ಆ ವರ್ಷ ಭಾರತ ತಂಡದ ಜತೆಗೆ ಪಾಕಿಸ್ತಾನ ಪ್ರವಾಸ ತೆರಳಿದ್ದ ಧೋನಿ, ಫೈಸಲಾಬಾದ್ ಟೆಸ್ಟ್ ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸಿ ಗಮನ ಸೆಳೆದಿದ್ದರು. ಆ ಶತಕ ಪೂರೈಸಿದ ಬಳಿಕ ಡ್ರೆಸ್ಸಿಂಗ್ ರೂಂಗೆ ಮರಳಿದ ಧೋನಿ, ‘ನಾನು ಈಗಲೇ ನನ್ನ ವಿದಾಯವನ್ನು ಪ್ರಕಟಿಸುವೆ. ನಾನು ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿರುವೆ. ನನಗಿದುವೇ ಸಾಕು. ಟೆಸ್ಟ್ ಕ್ರಿಕೆಟ್ನಲ್ಲಿ ನನಗೆ ಇದಕ್ಕಿಂತ ಹೆಚ್ಚಿನದು ಏನೂ ಬೇಡ’ ಎಂದಿದ್ದರು ಎಂದು ವಿವಿಎಸ್ ಲಕ್ಷ್ಮಣ್ ಅವರು ಸ್ಟಾರ್ ಸ್ಪೋರ್ಟ್ಸ್ನ ಚಾಟ್ ಶೋನಲ್ಲಿ ಮೆಲುಕು ಹಾಕಿದ್ದಾರೆ.
ಆ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪಾಕಿಸ್ತಾನ ತಂಡ 588 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಪಾಕ್ ನಾಯಕ ಇಂಜಮಾಮ್ ಉಲ್ ಹಕ್ ಮತ್ತು ಶಾಹಿದ್ ಅಫ್ರಿದಿ ಶತಕ ಸಿಡಿಸಿ ಮಿಂಚಿದ್ದರು. ಪ್ರತಿಯಾಗಿ ಭಾರತ ತಂಡದ ಪರ ಧೋನಿ ಮತ್ತು ಇರ್ಫಾನ್ ಪಠಾಣ್ 6ನೇ ವಿಕೆಟ್ಗೆ ಭರ್ಜರಿ ಜತೆಯಾಟವಾಡಿ ಪಂದ್ಯವನ್ನು ಡ್ರಾ ಸಾಧಿಸಲು ನೆರವಾಗಿದ್ದರು. ಧೋನಿ 148 ರನ್ ಬಾರಿಸಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಎಸೆತದಲ್ಲಿ ಔಟಾಗಿದ್ದರು. ಆ ಇನಿಂಗ್ಸ್ನ ಬಳಿಕ ಧೋನಿ ಡ್ರೆಸ್ಸಿಂಗ್ ರೂಂಗೆ ಮರಳಿ ಹೇಳಿದ ಮಾತಿನಿಂದ ಇಡೀ ತಂಡಕ್ಕೆ ಅಚ್ಚರಿಯಾಗಿತ್ತು. ಆದರೆ ಧೋನಿ ಯಾವಾಗಲೂ ಹಾಗೆಯೇ ಇರುವುದು ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಮೊದಲ ಕಾರು ಹುಡುಕಲು ನೆರವಾಗಿ, ಅಭಿಮಾನಿಗಳಿಗೆ ಸಚಿನ್ ತೆಂಡುಲ್ಕರ್ ಮೊರೆ!
ಫಲಿತಾಂಶಗಳಿಂದ ಭಾವನಾತ್ಮಕವಾಗಿ ಪ್ರತ್ಯೇಕವಾಗಿರುತ್ತಿದ್ದರು
ಧೋನಿ ಯಾವಾಗಲೂ ಪಂದ್ಯದ ಫಲಿತಾಂಶಗಳಿಂದ ಭಾವನಾತ್ಮಕವಾಗಿ ಪ್ರತ್ಯೇಕವಾಗಿರುತ್ತಿದ್ದರು. ಅದುವೇ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
‘ಭಾರತ ತಂಡದ ನಾಯಕತ್ವ ಅತ್ಯಂತ ಕಠಿಣವಾದ ಸವಾಲು ಎಂದು ನಾನು ಯಾವಾಗಲೂ ತಿಳಿದುಕೊಂಡಿರುವೆ. ಯಾಕೆಂದರೆ ಅದರಿಂದ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಆದರೆ ಧೋನಿ ಯಾವಾಗಲೂ ಫಲಿತಾಂಶಗಳಿಂದ ಭಾವನಾತ್ಮಕವಾಗಿ ದೂರ ಇರುತ್ತಿದ್ದ ಕಾರಣ ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದರು. ಅವರು ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾಗಿದ್ದಾರೆ. ಅವರು ನಮ್ಮ ದೇಶದ ರಾಯಭಾರಿಯೂ ಆಗಿದ್ದಾರೆ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಅದಕ್ಕಾಗಿಯೇ ಅವರು ಅಷ್ಟೊಂದು ಗೌರವಿಸಲ್ಪಡುತ್ತಾರೆ’ ಎಂದು ವಿವಿಎಸ್ ಲಕ್ಷ್ಮಣ್ ವಿವರಿಸಿದ್ದಾರೆ.
ಭವಿಷ್ಯದಲ್ಲಿ ಯಾವಾಗಲೂ ಧೋನಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ಗಳಿಗೆ ಮಾದರಿಯಾಗಿರುತ್ತಾರೆ. ಅವರ ಕೊಡುಗೆ ಭಾರತೀಯ ಕ್ರಿಕೆಟ್ಗೆ ಮಾತ್ರವಲ್ಲ ವಿಶ್ವ ಕ್ರಿಕೆಟ್ಗೂ ಸಾಕಷ್ಟಿದೆ ಎಂದು ಲಕ್ಷ್ಮಣ್ ಹೇಳಿದ್ದಾರೆ. ಎಲ್ಲ ಐಸಿಸಿ ಟ್ರೋಫಿಗಳನ್ನು ಜಯಿಸಿದ ವಿಶ್ವದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಧೋನಿ ಅವರದಾಗಿದೆ.
ಅಥಿಯಾ ಶೆಟ್ಟಿ ಈಜುಡುಪು ಚಿತ್ರಕ್ಕೆ ಕೆಎಲ್ ರಾಹುಲ್ ಕಮೆಂಟ್ ಏನು ಗೊತ್ತೇ?