ನವದೆಹಲಿ: ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ಕಳಪೆ ಆಟದಿಂದ ಕ್ರೀಡಾಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ. ಒಟ್ಟು ಮೂರು ಪಂದ್ಯಗಳನ್ನು ಆಡಿರುವ ರಾಹುಲ್ ಕ್ರಮವಾಗಿ 4, 9 ಮತ್ತು 9 ರನ್ಗಳೊಂದಿಗೆ ಕೇವಲ 22 ರನ್ ಮಾತ್ರ ಗಳಿಸಿದ್ದಾರೆ. ಮೂರು ಪಂದ್ಯಗಳಲ್ಲೂ ಟೀಮ್ ಇಂಡಿಯಾಗೆ ರಾಹುಲ್ ಆರಂಭಿಕ ಆಘಾತ ನೀಡಿದ್ದಾರೆ. ಹೀಗಿರುವಾಗ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯಕ್ಕೆ ರಾಹುಲ್ಗೆ ಅವಕಾಶ ಸಿಗಲಿದೆಯಾ ಎಂಬ ಪ್ರಶ್ನೆ ಮೂಡಿದ್ದು, ಇದಕ್ಕೆ ಮುಖ್ಯ ತರಬೇತುದಾರ ರಾಹುಲ್ ಡ್ರಾವಿಡ್ ಉತ್ತರ ನೀಡಿದ್ದಾರೆ.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡ್ರಾವಿಡ್, ಕೆ.ಎಲ್. ರಾಹುಲ್, ಅದ್ಭುತ ಆಟಗಾರನೆಂದು ನಾನು ಭಾವಿಸುತ್ತೇನೆ. ಈ ಹಿಂದಿನ ಬಹುತೇಕ ಪಂದ್ಯಗಳಲ್ಲಿ ಅದನ್ನು ಸಾಬೀತು ಮಾಡಿದ್ದಾರೆ. ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಸದ್ಯದ ಅವರ ಬ್ಯಾಟಿಂಗ್ ಸ್ಥಿತಿಯು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ಅಗ್ರ ಕ್ರಮಾಂಕದ ಬ್ಯಾಟರ್ಗಳಿಗೆ ಅಷ್ಟು ಸುಲಭವಲ್ಲ. ಪ್ರಸ್ತುತ ಟೂರ್ನಿಯು ಸವಾಲಿನದ್ದಾಗಿದೆ. ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಅನುಭವಿ ಬೌಲರ್ಗಳನ್ನು ಅಭ್ಯಾಸದ ಪಂದ್ಯದ ಸಮಯದಲ್ಲಿ ರಾಹುಲ್ ಸಮರ್ಥವಾಗಿ ಎದುರಿಸಿದ್ದಾರೆ. ಮುಂದಿನ ಕೆಲವು ಪಂದ್ಯಗಳಲ್ಲಿ ಎಲ್ಲವೂ ಒಟ್ಟಿಗೆ ಕ್ಲಿಕ್ ಆಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಡ್ರಾವಿಡ್ ಹೇಳಿದರು.
ಹೊರಗಡೆ ಏನು ಮಾತನಾಡಿಕೊಳ್ಳುತ್ತಾರೆ ಎಂಬುದರ ಮೇಲೆ ನಾವು ಗಮನ ಹರಿಸುವುದಿಲ್ಲ. ನಮ್ಮ ಮನಸ್ಸಿನಲ್ಲಿ ಕೆಲವೊಂದು ಯೋಜನೆಗಳಿವೆ ಮತ್ತು ನಾವು ನಮ್ಮ ಆಟಗಾರರ ಮೇಲೆ ನಂಬಿಕೆ ಇಡುತ್ತೇವೆ. ಎಲ್ಲರು ಏಳು-ಬೀಳುಗಳೊಂದಿಗೆ ಸಾಗುತ್ತಾರೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಭಾರತೀಯ ಕ್ರಿಕೆಟ್ನ ಸ್ವಭಾವನ್ನು ಸಹ ನಾವು ಅರ್ಥ ಮಾಡಿಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ಗೆ ಇನ್ನಷ್ಟು ಸಮಯ ಕೊಡಬೇಕಿದೆ. ಈ ನಿಟ್ಟಿನಲ್ಲಿ ನಾವು ಸಂಪೂರ್ಣ ಆತನ ಬೆಂಬಲಕ್ಕೆ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ರಾಹುಲ್ ಪುಟಿದೇಳಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ರಾಹುಲ್ ಹೇಳಿದರು.
ರಾಹುಲ್ ಜೊತೆ ಯಾವ ರೀತಿ ಸಂಭಾಷಣೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಡ್ರಾವಿಡ್, ನಾವು ಪ್ರತಿ ಆಟಗಾರರೊಂದಿಗೆ ಸಾಕಷ್ಟು ಸಂಭಾಷಣೆಗಳನ್ನು ನಡೆಸುತ್ತೇವೆ. ಅದನೆಲ್ಲ ಬಹಿರಂಗಪಡಿಸುವುದು ಕಷ್ಟ. ಈ ಟೂರ್ನಿಯ ಬಗ್ಗೆ ನಮಗೆ ಸಾಕಷ್ಟು ಸ್ಪಷ್ಟತೆ ಬಂದಿದೆ ಮತ್ತು ನಾವು ಅದರಿಂದ ಹಿಂದೆ ಸರಿಯುವುದಿಲ್ಲ ಎಂದರು.
ಮುಂದಿನ ಪಂದ್ಯ ನಾಳೆ (ನ.02) ಅಡೆಲೇಡ್ ಓವಲ್ ಮೈದಾನದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿದೆ. (ಏಜೆನ್ಸೀಸ್)
ಲವ್ ಬ್ರೇಕಪ್ಗೆ ಒಪ್ಪದ ಪ್ರಿಯಕರನ ಹತ್ಯೆ ಪ್ರಕರಣ: ಪೊಲೀಸ್ ಠಾಣೆಯ ಬಾತ್ರೂಮ್ನಲ್ಲಿ ಪ್ರೇಯಸಿಯ ಹೈಡ್ರಾಮ
ಮಕ್ಕಳನ್ನು ಶಾಲೆಯಿಂದ ಕರೆತರುವಾಗ ಕಾರು ಅಪಘಾತ: ನಮಗಾಗಿ ಪ್ರಾರ್ಥಿಸಿ ಎಂದು ನಟಿ ರಂಭಾ ಮನವಿ
ಯಲ್ಲಾಪುರದ ಶಿವಪುರ ಗ್ರಾಮದಲ್ಲಿರುವ ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಪುಂಡರ ದುರ್ವರ್ತನೆ