ತುಮಕೂರು: ದೇಶದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಸೇರಿ ಎಲ್ಲ ವರ್ಗಗಳ ಹಿತ ಕಾಯುವ ಪಕ್ಷವಿದ್ದರೆ ಆದು ಕಾಂಗ್ರೆಸ್ ಮಾತ್ರ ಎಂದು ಮಾಜಿ ಶಾಸಕ ಆರ್.ನಾರಾಯಣ್ ಭರವಸೆ ನೀಡಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅರೆಕೆರೆಯಲ್ಲಿ ಸೋಮವಾರ 75ನೇ ಸ್ವಾತಂತ್ರ ದಿನದ ಅಂಗವಾಗಿ ಕಾಂಗ್ರೆಸ್ ಆಯೋಜಿಸಿದ್ದ ಸ್ವಾತಂತ್ರ್ಯ ನಡೆಯಲ್ಲಿ ಮಾತನಾಡಿದರು. ಕಾಂಗ್ರೆಸ್ 130 ವರ್ಷಗಳ ಇತಿಹಾಸದಲ್ಲಿ ಎಂದಿಗೂ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ. ಎಲ್ಲ ಸಮುದಾಯಗಳಿಗೂ ಅಧಿಕಾರ ನೀಡಿ, ಅವರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದೆ, ಬಡವರ ಕಲ್ಯಾಣ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದರು.
ಭಾರತದ ಸ್ವಾತಂತ್ರಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಅಂದು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು, ಸಾವಿರಾರು ಜನರು ಜೈಲು ಸೇರಿ, ಕಷ್ಕಿಂದಿಯಂತಹ ಸಣ್ಣ ಲಾಕಪ್ಗಳಿಗೆ ವರ್ಷಗಳ ಕಾಲ ಬಂಧಿಯಾಗಿ, ಚಿತ್ರಹಿಂಸೆ ಅನುಭವಿಸಿ ಪರಕೀಯರಿಂದ ಭಾರತೀಯರನ್ನು ಬಿಡುಗಡೆಯಾಗುವಂತೆ ಮಾಡಿದ್ದಾರೆ. ನಮ್ಮ ಹೋರಾಟದಿಂದ ಬಂದ ಸ್ವಾತಂತ್ರ್ಯವನ್ನು ಇಂದು ನಾಡಿನ ಜನತೆ ಅನುಭವಿಸುತ್ತಿದ್ದಾರೆ ಎಂದರು.
ಇದರ ಅರಿವೇ ಇಲ್ಲದ ಇಂದಿನ ಯುವಜನರು, ಮೋದಿ ಹಾಗೂ ಬಿಜೆಪಿಯ ಭ್ರಮಾತ್ಮಕ ಮಾತುಗಳಿಗೆ ಬಲಿತಯಾಗಿ, ಇತ್ತ ಉದ್ಯೋಗವೂ ಇಲ್ಲದೆ, ತೆರಿಗೆ ಬಾರದಿಂದ ತತ್ತರಿಸಿ ಹೋಗಿದ್ದಾರೆ. ಇದರಿಂದ ಹೊರಬರಬೇಕಾದರೆ ಯುವಜನರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 75 ಕಿಮೀ ಪಾದಯಾತ್ರೆ ಕೈಗೊಂಡಿದ್ದೇವೆ. ದೇಶ ಪರಕೀಯರ ಕೈಗೆ ಸಿಕ್ಕಿ ನೆರಳುತಿದ್ದಾಗ ನೆಹರು,ಗಾಂಧಿ, ಪಟೇಲ್ ಅವರುಗಳು ಒಗ್ಗೂಡಿ ಹೋರಾಟ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ತಂದರು ಎಂದರು.
ಮುಖಂಡರಾದ ಕೆ.ಎ.ದೇವರಾಜು, ಹೆಬ್ಬೂರು ಚಿಕ್ಕಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಪಂಚಾಕ್ಷರಯ್ಯ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಪಣ್ಣ, ವಾಸುದೇವ್, ಕೋದಂಡರಾಮು, ವಿ.ಎಸ್.ಸೈಯದ್ ದಾದಾಪೀರ್, ಸಂಜೀವಕುಮಾರ್ ಇದ್ದರು.
ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ನ ವರ್ಚಸ್ಸು ಕ್ಷೀಣಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖುದ್ದು, ಈ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸ ಮಾಡಿ ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ.
ಆರ್.ನಾರಾಯಣ್ ಮಾಜಿ ಶಾಸಕ