ರಾವಂದೂರು: ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸೋಮವಾರ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿವು ಸೈನಿಕ ಅಕಾಡೆಮಿ ವತಿಯಿಂದ ಗುಲಾಬಿ ಹೂವು ಹಾಗೂ ಪೆನ್ ನೀಡಿ ಸ್ವಾಗತಿಸಲಾಯಿತು.
ಕೆಪಿಎಸ್ ಶಾಲೆಗಳ ಉಪಾಧ್ಯಕ್ಷ ಆರ್.ವಿ.ವಿಶ್ವನಾಥ್ ಮಾತನಾಡಿ, ಪರೀಕ್ಷೆಯು ವಿದ್ಯಾರ್ಥಿಗಳ ಸತತ ವಿದ್ಯಾಭ್ಯಾಸದ ಫಲವನ್ನು ಪರೀಕ್ಷಿಸುವ ಒಂದು ಪ್ರಮುಖ ಘಟ್ಟವಾಗಿದ್ದು, ಇದು ವಿದ್ಯಾರ್ಥಿಗಳ ದಿಕ್ಕನ್ನೇ ಬದಲಾಯಿಸುವ, ಅವರ ಜೀವನವನ್ನು ಉಜ್ವಲಗೊಳಿಸುವ ಮೊದಲ ಹಂತವಾಗಿದೆ. ಪರೀಕ್ಷೆಯಲ್ಲಿ ಎಲ್ಲರೂ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಯಶಸ್ಸನ್ನು ಕಾಣಬೇಕು ಎಂದು ಶುಭ ಹಾರೈಸಿದರು.
ಶಾಲೆಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಶಿವು ಸೈನಿಕ ಅಕಾಡೆಮಿಯ ಸಂಸ್ಥಾಪಕ ಶಿವು ಗುಲಾಬಿ ಹೂವನ್ನು ನೀಡಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ರಾಜಯ್ಯ, ಕೆಪಿಎಸ್ ಶಾಲೆಗಳ ಅಭಿವೃದ್ಧಿ ಸಮಿತಿಯ ಸದಸ್ಯ ಜಲೇಂದ್ರ, ಶಿವು ಸೈನಿಕ ಅಕಾಡೆಮಿ ಸದಸ್ಯ ರಾಜು ಮತ್ತಿತರರು ಹಾಜರಿದ್ದರು.