ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ನೆಪವೊಡ್ಡಿ ಪಕ್ಷದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್ ಐ ಆರ್ ದಾಖಲಿಸಿರುವುದು ಖಂಡನೀಯ. ಇದೇ ಆಧಾರದಲ್ಲಿ ಶಾಸಕರನ್ನು ಬಂಧಿಸಿದರೆ ಪಕ್ಷ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಮುಂದಿನ ಬೆಳವಣಿಗೆಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದಲ್ಲಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶಶಿರಾಜ್ ಹೆಸರನ್ನೂ ಎಫ್ಐಆ ರ್ ನಲ್ಲಿ ಸೇರಿಸುವ ಪಿತೂರಿ ಹೂಡಿದ್ದನ್ನು ಹರೀಶ್ ಪೂಂಜಾ ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಪೊಲೀಸ್ ಠಾಣೆಗೂ ಹೋಗಿ ಉದ್ವೇಗದಿಂದ ಮಾತನಾಡಿರುವುದು ನಿಜ. ಹಾಗಂತ ಪೊಲೀಸರ ದಬ್ಬಾಳಿಕೆ, ಅಧಿಕಾರ ದುರ್ಬಳಕೆ ಸಹಿಸಿಕೊಂಡಿರಲಾಗದು ಎಂದರು.
ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರ ದಬ್ಬಾಳಿಕೆ ನಡೆಯುತ್ತಿದೆ. ಸೇಡು ತೀರಿಸಿಕೊಳ್ಳುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಈ ಧೋರಣೆಯ ವಿರೋಧಿಸಿ ಠಾಣೆಗೆ ಹೋಗಿ ಏರುಧ್ವನಿಯಲ್ಲಿ ಶಾಸಕ ಪೂಂಜ ಮಾತನಾಡಿ ಪ್ರತಿಭಟನೆಗೆ ಕರೆ ಕೊಟ್ಟಿದ್ದೂ ಹೌದು ಎಂದು ಹೇಳಿದರು.
ಪೊಲೀಸರ ನಡೆ ತಪ್ಪು
ನೀತಿ ಸಂಹಿತೆ ನೆಪದಲ್ಲಿ ಶಾಸಕತ ಬಂಧನಕ್ಕೆ ಮುಂದಾಗಿರುವುದು ತಪ್ಪು. ನಮ್ಮ ಹೋರಾಟ, ಪ್ರತಿಪಕ್ಷಗಳ ಧ್ವನಿ ಹತ್ತಿಕ್ಕುವ ಕೆಲಸವಾಗುತ್ತಿದೆ. ಕಾರ್ಯಕರ್ತರಿಗಾದ ನೋವು, ದಬ್ಬಾಳಿಕೆ ನೋಡಿದ ಹರೀಶ್ ಪೂಂಜ ಉದ್ವೇಗದಿಂದ ಕೆಲವು ಮಾತಾಡಿದ್ದಾರೆ. ಪೊಲೀಸರಿಗೆ ಜೋರು ಮಾಡಿರುವುದು ಸರಿಯಲ್ಲ.
ಇದನ್ನೇ ನೆಪವಾಗಿಸಿ ನಮ್ಮ ಶಾಸಕರು, ಕಾರ್ಯಕರ್ತರನ್ನು ಬಂಧಿಸಿದರೆ ತೀವ್ರ ಹೋರಾಟ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಹದಗೆಡಲು ಪೊಲೀಸರೇ ಕುಮ್ಮಕ್ಕು ನೀಡುತ್ತಿದ್ದಾರೆ. ಮುಂದೆ ಆಗುವ ಬೆಳವಣಿಗೆಗೆ ಪೊಲೀಸರು ಹೊಣೆಯಾಗಲಿದ್ದಾರೆ. ಈ ವಿಚಾರದಲ್ಲಿ ಗೃಹ ಸಚಿವರು ಮಧ್ಯೆಪ್ರವೇಶಿಸಿ ಪೊಲೀಸ್ ವರಿಷ್ಠರ ಜತೆಗೆ ಮಾತನಾಡಿ ದಬ್ಬಾಳಿಕೆ ನಿಲ್ಲಿಸಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.