ನವದೆಹಲಿ: ನನ್ನ ತಾಯಿ ಹಾಗೂ ಅಕ್ಕನನ್ನು ಕಳೆದುಕೊಂಡು ಸಂಪೂರ್ಣ ಮೂಕಳಾಗಿದ್ದೇನೆ. ಆ ಶಾಕ್ನಿಂದ ಹೊರ ಬರಲು ಪ್ರಯತ್ನಿಸುತ್ತಿದ್ದು, ಇಂಥ ಕಠಿಣ ಸ್ಥಿತಿಯಲ್ಲಿ ಮಾನಸಿಕ ಆರೋಗ್ಯ ಅತ್ಯಗತ್ಯ ಎಂದು ಭಾರತ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಕಳೆದ ತಿಂಗಳು ವೇದಾ ಕೃಷ್ಣಮೂರ್ತಿ ಅವರ ಕುಟುಂಬದ 9 ಮಂದಿಗೆ ಕೋವಿಡ್ ಕಾಣಿಸಿಕೊಂಡಿತು. ಇದರಲ್ಲಿ ವೇದಾ ಅವರ ತಾಯಿ ಹಾಗೂ ಅಕ್ಕ ಇಬ್ಬರೂ ನಿಧನರಾದರು. ನನ್ನ ಅಕ್ಕ ಹುಷಾರಾಗಿ ಮನೆಗೆ ವಾಪಸಾಗುವ ವಿಶ್ವಾಸವಿತ್ತು. ಆದರೆ, ವಿಧಿಯಾಟ ಆಗಿದ್ದೇ ಬೇರೆ. ನಾನು ಸಂಪೂರ್ಣ ಆಘಾತಕ್ಕೊಳಗಾದೆ ಎಂದು ವೇದಾ ಹೇಳಿದ್ದಾರೆ.
ಇದನ್ನೂ ಓದಿ:VIDEO: ತಂದೆ ಬರ್ತ್ಡೇ ಪಾಟಿರ್ಯಲ್ಲಿ ಎಬಿ ಡಿವಿಲಿಯರ್ಸ್ ಹಾಡಿದ ಹಾಡುಗಳಿಗೆ ಅಭಿಮಾನಿಗಳು ಫಿದಾ
ನಾನು ಕುಟುಂಬದ ಎಲ್ಲ ಸದಸ್ಯರಿಗೆ ಧೈರ್ಯ ಹೇಳುವ ಕೆಲಸಮಾಡಿದೆ. ಸಾಧ್ಯವಾದಷ್ಟು ಮಟ್ಟಿಗೆ ಧೈರ್ಯ ಹೇಳಿದೆ. ನೀವು ಅದರ ವಿರುದ್ಧ ಹೋರಾಡಬೇಕು ಎಂದು ಹೇಳುತ್ತಿದ್ದೆ. ಮನೆಯ ಎಲ್ಲ ಸದಸ್ಯರಿಗೂ ಧೈರ್ಯ ಹೇಳಿರುವೆ ಎಂದು ವೇದಾ ಹೇಳಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟುಗಾರ್ತಿಯೂ ಆಗಿರುವ ವೇದಾ ಅವರನ್ನು ಹೊರತುಪಡಿಸಿ ಕುಟುಂಬದ ಎಲ್ಲ ಸದಸ್ಯರಿಗೂ ಕೋವಿಡ್-19 ಕಾಣಿಸಿಕೊಂಡಿತ್ತು. ಅಲ್ಲದೆ, ಇಡೀ ಕುಟುಂಬಕ್ಕೆ ಕೋವಿಡ್ ಕಾಡುತ್ತಿದ್ದರೂ ವೇದಾ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣಗಳ ಮೂಲಕ ಮತ್ತೊಬ್ಬರಿಗೆ ಸಹಾಯ ಹಸ್ತಚಾಚುತ್ತಿದ್ದರು. ತೊಂದರೆಯಲ್ಲಿದ್ದ ಅದೆಷ್ಟೋ ರೋಗಿಗಳಿಗೆ ನೆರವಾಗಿದ್ದಾರೆ. ಕೋವಿಡ್ ಬಂದ ತಕ್ಷಣ ಹೆದರಬಾರದು. ಮಾನಸಿಕ ಸದೃಢ ಅಗತ್ಯ. ನನ್ನ ಅಕ್ಕ ವತ್ಸಲಾ ಗಾಬರಿಗೊಂಡಿದ್ದೆ ಅವರ ಸಾವಿಗೆ ಪ್ರಮುಖ ಕಾರಣ ಎಂದು 28 ವರ್ಷದ ವೇದಾ ಹೇಳಿದ್ದಾರೆ. ನನ್ನ ತಾಯಿಯೂ ಕೂಡ ಗಾಬರಿಗೆ ಒಳಗಾಗಿದ್ದರು ಎಂದರು.
ಇದನ್ನೂ ಓದಿ: ಸ್ಟೀವನ್ ಸ್ಮಿತ್ ಕೊಠಡಿ ಪಕ್ಕ ಮಲಗಿದರೆ ರಾತ್ರಿ ವೇಳೆ ನಿದ್ದೆ ಬರುವುದಿಲ್ಲ ಎಂದು ವಾರ್ನರ್ ಹೇಳಿದ್ದೇಕೆ
ವೇದಾ ಕೃಷ್ಣಮೂರ್ತಿ ರಾಷ್ಟ್ರೀಯ ತಂಡದ ಪರ 48 ಏಕದಿನ ಹಾಗೂ 76 ಟಿ20 ಪಂದ್ಯಗಳನ್ನಾಡಿದ್ದಾರೆ. ಇಂಗ್ಲೆಂಡ್ ಪ್ರವಾಸದಿಂದ ವೇದಾ ಅವರನ್ನು ಕೈಬಿಡಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಫೋನ್ ಮಾಡಿ ಸಮಾಧಾನ ಹೇಳಿದ್ದನ್ನು ಸ್ಮರಿಸಿದ ವೇದಾ ಕೃಷ್ಣಮೂರ್ತಿ, ಬೆಂಗಳೂರಿಗೆ ಆಗಮಿಸಿದಾಗ ಭೇಟಿಯಾಗುವುದಾಗಿ ಹೇಳಿದ್ದಾರೆ ಎಂದರು.