ವಾರಾಣಸಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಕೆಲವು ಕಡೆ ಇನ್ನೂ ಪ್ರತಿಭಟನೆ ನಡೆಯುತ್ತಿದೆ. ಸಿಎಎಯನ್ನು ಯಾವ ಕಾರಣಕ್ಕೂ ಅನುಷ್ಠಾನಗೊಳಿಸುವುದಿಲ್ಲ ಎಂದು ಹಲವು ರಾಜ್ಯ ಸರ್ಕಾರಗಳು ತಮ್ಮ ನಿರ್ಣಯವನ್ನು ಹೇಳಿವೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಜಮ್ಮುಕಾಶ್ಮೀರದಲ್ಲಿ ತೆರವುಗೊಳಿಸಲಾದ ಆರ್ಟಿಕಲ್ 370ನ್ನು ಹಿಂಪಡೆಯುವ ಮಾತೇ ಇಲ್ಲ. ಇವೆರಡೂ ವಿಚಾರದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ವಾರಾಣಸಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 63 ಅಡಿ ಎತ್ತರದ ಪುತ್ಥಳಿ ಹಾಗೂ ಸ್ಮಾರಕ ಕೇಂದ್ರ ಉದ್ಘಾಟನೆ ಮಾಡಿದ ನಂತರ ಮಾತನಾಡಿ, ಆರ್ಟಿಕಲ್ 370 ರದ್ದತಿ ಹಾಗೂ ಸಿಎಎ ಹೀಗೆ ಮುಂದುವರಿಯಲಿದೆ ಎಂದು ಹೇಳಿದರು.
ಅಲ್ಲದೆ, ಅಯೋಧ್ಯೆಯಲ್ಲಿ ಸರ್ಕಾರ ಸ್ವಾಧೀನಮಾಡಿಕೊಂಡ 67 ಎಕರೆ ಭೂಮಿಯನ್ನು, ರಾಮಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ, ಹೊಸದಾಗಿ ರಚನೆಯಾದ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದರು.
ಭವ್ಯವಾದ ರಾಮಮಂದಿರ ನಿರ್ಮಾಣಕ್ಕಾಗಿ ರಚನೆಯಾಗಿರುವ ಈ ಟ್ರಸ್ಟ್ ತ್ವರಿತವಾಗಿ ತನ್ನ ಕಾರ್ಯ ನಡೆಸಲಿದೆ ಎಂದು ಹೇಳಿದರು.
ಇಂದು ಪ್ರಧಾನಿ ಮೋದಿ ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ 1200 ಕೋಟಿ ರೂಪಾಯಿ ವೆಚ್ಚದ ಒಟ್ಟು 36 ಯೋಜನೆಗಳಿಗೆ ಚಾಲನೆ ನೀಡಿದರು. 14 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. (ಏಜೆನ್ಸೀಸ್)