ಬೆಂಗಳೂರು: ಇಂದು ಬೆಂಗಳೂರಿನ ಲಕ್ಕಸಂದ್ರದ ಮೆಟ್ರೋ ಸುರಂಗ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: CEO ಕೆಲಸ ತೊರೆದು ಟ್ರಕ್ ಡ್ರೈವರ್ ಆದ ವ್ಯಕ್ತಿ ಕ್ಯಾನ್ಸರ್ ಸೋಲಿಸಿದರು
ಮೆಟ್ರೋ ಸುರಂಗ ಪರಿಶೀಲಿಸಿದ ಬಳಿಕ ಮಾತನಾಡಿದ ಡಿಸಿಎಂ, “ಕಾಮಗಾರಿ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಣ್ಣಲ್ಲಿ ಸಾಧಕ ಭಾದಕಗಳನ್ನು ನೋಡಬೇಕಲ್ವೇ, ಹಾಗಾಗಿ ಖುದ್ದಾಗಿ ಕಾಮಗಾರಿ ವೀಕ್ಷಿಸಲು ನಾನೇ ಆಗಮಿಸಿದೆ. 20.9 ಕಿ.ಮೀ ಸುರಂಗ ಮಾರ್ಗವಾಗುತ್ತಿದೆ. ಇದರಲ್ಲಿ ಒಟ್ಟು 18 ನಿಲ್ದಾಣಗಳು ಬರಲಿದೆ. 4 ಪ್ಯಾಕೇಜ್ನಲ್ಲಿ ಯೋಜನೆ ತೆಗೆದುಕೊಳ್ಳಲಾಗಿದೆ. ಸದ್ಯ ಕಾಮಗಾರಿಯ 70% ನಷ್ಟು ಕೆಲಸ ಈಗಾಗಲೇ ಮುಗಿದಿದ್ದು, 2025ಕ್ಕೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ” ಎಂದು ಹೇಳಿದರು.
“ಪ್ರಕೃತಿ, ತಂತ್ರಜ್ಞಾನ, ಸರ್ಕಾರ, ಸಹಕಾರ ಕೊಟ್ಟಾಗ ಯೋಜನೆ ಸಾಧ್ಯವಾಗಲಿದೆ. ಬೆಂಗಳೂರಿನಲ್ಲಿ ನಾವು ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಟ್ರಾಫಿಕ್ ಕಡಿಮೆ ಮಾಡಲು ಬ್ರಾಂಡ್ ಬೆಂಗಳೂರಿಗಾಗಿ ಯೋಜನೆ ರೂಪಿಸಿದ್ದೇವೆ. ಟ್ರಾಫಿಕ್ ಕಡಿಮೆಯಾಗಿ ಮೆಟ್ರೋ ಬಳಕೆಯಾಗಬೇಕು ಆ ರೀತಿಯಂತೆ ಇದು ಪ್ರಗತಿಯಾಗಬೇಕು ಎಂಬುದು ನಮ್ಮ ಉದ್ದೇಶ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.